ತುಮಕೂರು: ನಗರದ ಹೊರ ವಲಯದ ಅಮಾಲಪುರ ಬಳಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿಕೊಡಲು ಜಿಲ್ಲಾ ಆಡಳಿತಕ್ಕೆ ಇನ್ನೂ ಒಂದು ವಾರ ಗಡುವು ನೀಡಲು ವಕೀಲರ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದಲ್ಲಿ ಮಂಗಳವಾರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
‘ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಭೆ ನಡೆಸಿದ ನಂತರ ಜಾಗ ನೀಡುವ ಸಂಬಂಧ ಒಂದಿಷ್ಟು ಪ್ರಕ್ರಿಯೆಗಳು ನಡೆದಿವೆ. ಹೀಗಾಗಿ ಜಿಲ್ಲಾಡಳಿತಕ್ಕೆ ಇನ್ನೂ ಸ್ವಲ್ಪ ದಿನ ಕಾಲಾವಕಾಶ ನೀಡೋಣ' ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ರವಿಗೌಡ ಸಭೆಗೆ ತಿಳಿಸಿದರು.
ನ್ಯಾಯಾಲಯ ಸಂಕೀರ್ಣಕ್ಕಾಗಿ 20 ಎಕರೆ ಜಾಗ ನೀಡುವಂತೆ ಕೋರಲಾಗಿದೆ. ಜಾಗ ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲು ಎರಡು ವಾರ ಕಾಲಾವಕಾಶ ನೀಡುವಂತೆ ಈ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೋರಿದ್ದರು. ನೀಡಿದ್ದ ಕಾಲಾವಕಾಶ ಮುಗಿದಿದ್ದರೂ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 20 ಎಕರೆ ಜಾಗ ನೀಡಬೇಕು. ಇಲ್ಲದಿದ್ದರೆ ಭವಿಷ್ಯದ ದೃಷ್ಟಿಯಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಷ್ಟಕರವಾಗಲಿದೆ. ಈಗಿರುವ ನ್ಯಾಯಾಲಯದಲ್ಲಿ ಕಲಾಪ ನಡೆಸುವುದೇ ಕಷ್ಟವಾಗಿದೆ. ಕಕ್ಷಿದಾರರು, ವಕೀಲರು, ನ್ಯಾಯಾಂಗ ಸಿಬ್ಬಂದಿಗೆ ಸ್ಥಳಾವಕಾಶವಿಲ್ಲದೆ ಪರಿತಪಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಬಿ.ಜಯಂತ್ ಕುಮಾರ್ ಹೇಳಿದರು.
ವಕೀಲ ಮಂಜುನಾಥ್ ಪ್ರತಿಭಟನೆ ಮಾಡದೇ ಬೇರೆ ಮಾರ್ಗವಿಲ್ಲ ಎಂದರು. ವಕೀಲರಾದ ಶಿವಕುಮಾರ್, ಸಿ.ಕೆ.ಮಹೇಂದ್ರ, ಓಬಣ್ಣ, ಬಿ.ಜಿ.ನಾಗರಾಜ್, ಜಿಲ್ಲಾಡಳಿತಕ್ಕೆ ಒಂದು ವಾರ ಸಮಯ ನೀಡಿ, ನಂತರ ಪ್ರತಿಭಟನೆ ನಿರ್ಧಾರಕ್ಕೆ ಬರೋಣ’ ಎಂದು ಸಲಹೆ ಮಾಡಿದರು.
ಈ ಮಧ್ಯೆ ಅಮಲಾಪುರದಲ್ಲಿರುವ ಸರ್ಕಾರಿ ಜಾಗ, ಅರಣ್ಯ ಇಲಾಖೆಗೆ ಸೇರಿದ ಭೂಮಿ ಒತ್ತುವರಿ ಬಗ್ಗೆ ತನಿಖೆ ನಡೆಸಲು ಕಂದಾಯ ಇಲಾಖೆ ಆಯುಕ್ತರು ಆದೇಶಿಸಿದ್ದು, ಅದಕ್ಕಾಗಿ ವಿಶೇಷ ತಂಡ ರಚಿಸಿದ್ದಾರೆ.
ಕಷರ್ಗಳ ಲಾಬಿಗೆ ಮಣಿದು ಜಾಗ ನೀಡಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಈಗ ಇಡೀ ಜಾಗದ ಸರ್ವೆಗೆ ಸರ್ಕಾರವೇ ತನಿಖಾ ತಂಡ ನೇಮಕ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.