ಕೊರಟಗೆರೆ: ಕಡಿಮೆ ಬೆಲೆಗೆ ಬಂಗಾರದ ಆಭರಣ ನೀಡಲಾಗುವುದು ಎಂದು ನಂಬಿಸಿ ಆಂಧ್ರಪ್ರದೇಶದ ಗುತ್ತಿ ಗ್ರಾಮದ ಶಾಶಾವಲಿ ಎಂಬಾತನಿಗೆ ವಂಚಿಸಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಹಂಚಿಹಳ್ಳಿ ಅರಸಾಪುರ ಗ್ರಾ.ಪಂ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯ ಯುವರಾಜ (22), ಕನ್ನೇಶ (45), ರಾಜುಬಾಬು (34) ಬಂಧಿತರು. ಜಿ.ನಾಗೇನಹಳ್ಳಿ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಆರೋಪಿಗಳನ್ನು ಬಂಧಿಸಿ, ₹5.50 ಲಕ್ಷ ನಗದು, ಬೈಕ್ ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಸಂದೀಲ್ (36) ಎಂಬಾತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳು ಶಾಶಾವಲಿ ಎಂಬುವರಿಗೆ ಕಡಿಮೆ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಆಮಿಷಯೊಡ್ಡಿ, ಲಕ್ಷಾಂತರ ರೂಪಾಯಿ ವಂಚಿಸಿದ್ದರು. ಈ ಬಗ್ಗೆ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ರಚಿಸಿದ್ದ ವಿಶೇಷ ತನಿಖಾ ತಂಡ ಘಟನೆ ನಡೆದ 2 ದಿನಗಳಲ್ಲಿ ಮೂವರನ್ನು ಬಂಧಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್ಪಿ ರಾಮಚಂದ್ರಪ್ಪ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಆರ್.ಪಿ.ಅನಿಲ್ ನೇತೃತ್ವದಲ್ಲಿ ಪಿಎಸ್ಐ ಚೇತನಗೌಡ ತಂಡದ ಆರೋಪಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.