ತುಮಕೂರು: ದಸರಾ ಸಮಿತಿಯಿಂದ ಸೆ. 22ರಿಂದ ಅ. 2ರ ವರೆಗೆ ನಗರದ ಕೆ.ಆರ್.ಬಡಾವಣೆಯ ಶ್ರೀರಾಮ ಮಂದಿರದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
‘ಕಳೆದ 34 ವರ್ಷಗಳಿಂದ ಎಲ್ಲರನ್ನೂ ಒಳಗೊಂಡು, ಯಾವುದೇ ಲೋಪವಿಲ್ಲದೆ ಸಂಪ್ರದಾಯ ಬದ್ಧವಾಗಿ ದಸರಾ ಆಚರಿಸಲಾಗುತ್ತಿದೆ. ಈ ಬಾರಿ 11 ದಿನ ವಿವಿಧ ಕೈಂಕರ್ಯಗಳು ಜರುಗಲಿವೆ’ ಎಂದು ಉತ್ಸವದ ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಸರಾ ಸಮಿತಿ ಖಜಾಂಚಿ ಜಿ.ಎಸ್.ಬಸವರಾಜು, ‘ಜಿಲ್ಲಾ ಆಡಳಿತ ನಗರದಲ್ಲಿ ಅಳವಡಿಸಿರುವ ಫ್ಲೆಕ್ಸ್ಗಳಲ್ಲಿ ಶಾಸಕರ ಭಾವಚಿತ್ರ ಹಾಕದೆ ಅವಮಾನ ಮಾಡಲಾಗಿದೆ. ಸಾರ್ವಜನಿಕರ ಹಣದಿಂದ ದಸರಾ ಉತ್ಸವ ನಡೆಯುತ್ತಿದೆ. ಬೇರೆಯವರನ್ನು ಓಲೈಸಲು ರಾಜಕೀಯ ಸಮಾವೇಶ ರೀತಿ ಮಾಡುತ್ತಿರುವುದು ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮಿಕಾಂತ್, ‘ಸೆ. 23ರಂದು ಭಜನಾ ಸ್ಪರ್ಧೆ, 24ರಂದು ಬೆಂಕಿ ರಹಿತ ಅಡುಗೆ ಸ್ಪರ್ಧೆ, ರಂಗಗೀತೆ ಸ್ಪರ್ಧೆ, 25ರಂದು ಜನಪದ ಗೀತೆ ಗಾಯನ ಸ್ಪರ್ಧೆ, 26ರಂದು ವೇಷಭೂಷಣ ಸ್ಪರ್ಧೆ, 28, 29ರಂದು ಸಾಂಸ್ಕೃತಿಕ ನೃತ್ಯ ಸ್ಪರ್ಧೆ, ಅ. 2ರಂದು ರಂಗೋಲಿ ಸ್ಪರ್ಧೆ, ಸಂಜೆ 4.30 ಗಂಟೆಗೆ ಶಮೀ ಪೂಜೆ ನೆರವೇರಲಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಇತರರು ಭಾಗವಹಿಸಲಿದ್ದಾರೆ’ ಎಂದರು.
ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಲ್ಲೇಶಯ್ಯ, ಸಂಯೋಜಕ ಕೆ.ಎನ್.ಗೋವಿಂದರಾವ್, ಕಾರ್ಯದರ್ಶಿಗಳಾದ ಕೆ.ಶಂಕರ್, ಪರಶುರಾಮಯ್ಯ, ಎಚ್.ಎಂ.ರವೀಶಯ್ಯ, ರೇಖಾ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.