ADVERTISEMENT

ತುಮಕೂರಿನಲ್ಲಿ ಮೈನವಿರೇಳಿಸಿದ ಪಂಜಿನ ಕವಾಯತು: 256 ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:48 IST
Last Updated 29 ಸೆಪ್ಟೆಂಬರ್ 2025, 6:48 IST
<div class="paragraphs"><p>ತುಮಕೂರಿನಲ್ಲಿ ಭಾನುವಾರ ಪಂಜಿನ ಕವಾಯತು ನಡೆಯಿತು </p></div>

ತುಮಕೂರಿನಲ್ಲಿ ಭಾನುವಾರ ಪಂಜಿನ ಕವಾಯತು ನಡೆಯಿತು

   

ತುಮಕೂರು: 256 ವಿದ್ಯಾರ್ಥಿಗಳು ಕೈಯಲ್ಲಿ ಬೆಂಕಿ ಹಿಡಿದು ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ದೃಶ್ಯ ನೋಡುಗರನ್ನು ರೋಮಾಂಚನಗೊಳಿಸಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ತುಮಕೂರು ದಸರಾ ಪ್ರಯುಕ್ತ ಆಯೋಜಿಸಿದ್ದ ‘ಪಂಜಿನ ಕವಾಯತು’ ದಸರಾದ ವೈಭವ ಹೆಚ್ಚಿಸಿತು. ಎನ್‌ಸಿಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳ ಸಾಹಸಕ್ಕೆ ಸಾವಿರಾರು ಜನ ಸಾಕ್ಷಿಯಾದರು. ನೂರಾರು ವಿದ್ಯಾರ್ಥಿಗಳು ಸಾಲಾಗಿ ನಿಂತು ಬೆಂಕಿಯ ಜತೆಗೆ ಆಟವಾಡುತ್ತಿದ್ದಂತೆ ಭಾಸವಾಯಿತು.

ADVERTISEMENT

ನೂರಾರು ಬೆಂಕಿ ಪಂಜುಗಳನ್ನು ಬಳಸಿ ‘ತುಮಕೂರು’, ‘ದಸರಾ–2025’, ‘ಥ್ಯಾಂಕ್ಯೂ’, ‘ವೆಲ್‌ಕಮ್‌ ಟು ಆಲ್‌’ ಎಂಬ ಇಂಗ್ಲಿಷ್‌ ಪದದ ಕಲಾಕೃತಿ ಅರಳಿಸಿದರು. ಬೆಂಕಿ ಹಿಡಿದು ಧೈರ್ಯದಿಂದ ಹೆಜ್ಜೆ ಹಾಕುತ್ತಿದ್ದ ವಿದ್ಯಾರ್ಥಿಗಳು ವೀಕ್ಷಕರಲ್ಲಿ ಬೆರಗು ಮೂಡಿಸಿದರು. ಜಿಲ್ಲೆಯ ಜನತೆಯ ಎದುರಿಗೆ ವಿಸ್ಮಯ ಲೋಕ ತೆರೆದಿಟ್ಟರು. ಇಡೀ ದಸರಾಗೆ ಮೆರುಗು ತಂದರು.

ಸಂಜೆ 7 ಗಂಟೆಗೆ ಸರಿಯಾಗಿ ಶುರುವಾದ ಕವಾಯತು ಸುಮಾರು 25 ನಿಮಿಷಗಳ ಕಾಲ ನಡೆಯಿತು. 256 ಜನರಲ್ಲಿ 160 ಮಂದಿ ವಿದ್ಯಾರ್ಥಿನಿಯರೇ ಇದ್ದರು. ಯಾವುದೇ ಅಳುಕಿಲ್ಲದೆ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಸಾಹಸ ದೃಶ್ಯಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಎರಡು ತಿಂಗಳ ನಿರಂತರ ತಯಾರಿ ಫಲ ನೀಡಿತು. ವೀಕ್ಷಕರಿಂದ ಪಂಜಿನ ಕವಾಯತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕವಾಯತು ವೀಕ್ಷಣೆಗೆ ಆಗಮಿಸಲು ಸಾರ್ವಜನಿಕರಿಗೆ ಉಚಿತವಾಗಿ ಪಾಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಸಾವಿರಾರು ಜನ ಕ್ರೀಡಾಂಗಣದ ಕಡೆಗೆ ಹೆಜ್ಜೆ ಹಾಕಿದರು. ಇಡೀ ಕ್ರೀಡಾಂಗಣ ಜನರಿಂದ ತುಂಬಿತ್ತು. ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರು ಕವಾಯತು ವೀಕ್ಷಿಸಿದರು. ಸ್ಥಳದ ಅಭಾವದಿಂದ ಹತ್ತಾರು ಜನ ಹೊರಗೆ ಉಳಿದಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಕಳೆದ ವರ್ಷದಿಂದ ಜಿಲ್ಲಾ ಆಡಳಿತದಿಂದ ದಸರಾ ಆಚರಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಮೈಸೂರು ಮಾದರಿಯಲ್ಲಿ ಕವಾಯತು ನಡೆಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಕವಾಯತು ನಂತರ ಹಸಿರು ಸಿಡಿಮದ್ದು ಪ್ರದರ್ಶನ ನಡೆಯಿತು. ಗಾಯಕ ಕಂಬದ ರಂಗಯ್ಯ ಅವರಿಂದ ಗಾಯನ ಕಾರ್ಯಕ್ರಮ ನೆರವೇರಿತು.

ಪಂಜಿನ ಕವಾಯತಿನಲ್ಲಿ ಗಮನ ಸೆಳೆದ ದೃಶ್ಯ
ಪಂಜಿನ ಕವಾಯತಿನಲ್ಲಿ ವಿದ್ಯಾರ್ಥಿಗಳ ಸಾಹಸ
ಪಂಜಿನ ಕವಾಯತಿನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಗಮನ ಸೆಳೆದ ಪಂಜಿನ ಕವಾಯತು

ರಸ್ತೆ ಬಂದ್‌

ಮಧ್ಯಾಹ್ನ 2 ಗಂಟೆಯಿಂದಲೇ ಕ್ರೀಡಾಂಗಣ ಮುಂಭಾಗದ ರಸ್ತೆಯಲ್ಲಿ ವಾಹನ ಓಡಾಟ ಬಂದ್‌ ಮಾಡಲಾಗಿತ್ತು. ರಾತ್ರಿ 8 ಗಂಟೆಯ ವರೆಗೆ ಈ ರಸ್ತೆಯಲ್ಲಿ ಸಾರ್ವಜನಿಕರ ವಾಹನ ಸಂಚರಿಸಲಿಲ್ಲ. ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಾರ್ವಜನಿಕರು ಬೆಂಕಿಪೊಟ್ಟಣ ಇತರೆ ಸ್ಫೋಟಕ ವಸ್ತು ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.

ದಸರಾದಲ್ಲಿ ಇಂದು

ಚಾಮುಂಡೇಶ್ವರಿ ದೇವಿಗೆ ಶಾರದಾ ಅಲಂಕಾರ. ಸ್ಥಳ– ಜೂನಿಯರ್‌ ಕಾಲೇಜು ಮೈದಾನ. ಬೆಳಿಗ್ಗೆ 9. ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮದ ಉದ್ಘಾಟನೆ ದಾಂಡಿಯ ನೃತ್ಯ ಪ್ರದರ್ಶನ ಜನಪದೋತ್ಸವ ನಗೆಹಬ್ಬ. ಸಂಜೆ 5 ಕೊರಟಗೆರೆಯ ವಾಲ್ಮೀಕಿ ಕಲಾಸಂಘದಿಂದ ‘ರಾಮಾಂಜನೇಯ ಸಖ್ಯ’ ನಾಟಕ ಪ್ರದರ್ಶನ. ಸ್ಥಳ– ಗುಬ್ಬಿ ವೀರಣ್ಣ ಕಲಾಕ್ಷೇತ್ರ. ಬೆಳಿಗ್ಗೆ 11. ಕೆಂಪೇಗೌಡ ಕಲಾಸಂಘದಿಂದ ‘ಪಾದುಕಾ ಪಟ್ಟಾಭಿಷೇಕ’ ನಾಟಕ. ಮಧ್ಯಾಹ್ನ 3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.