ADVERTISEMENT

ಗೋಡಂಬಿ ಬೆಳೆಯಲು ಜಿಲ್ಲೆ ಪೂರಕ: ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 13:31 IST
Last Updated 1 ಫೆಬ್ರುವರಿ 2020, 13:31 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ತುಮಕೂರು: ತುಮಕೂರು ಜಿಲ್ಲೆ ಗೋಡಂಬಿ ಬೆಳೆಗೆ ಪೂರಕವಾಗಿದೆ. ಹಾಗಾಗಿ ಇಲ್ಲಿನ ಜನರು ಕೇವಲ ತೆಂಗು ಬೆಳೆಗೆ ಮಾತ್ರ ಜೋತುಬೀಳದೆ, ಗೋಡಂಬಿ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತೋಟಗಾರಿಕೆ ಇಲಾಖೆ ಆವರಣದಲ್ಲಿ ಶುಕ್ರವಾರ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದಿನ ಧಾವಂತ ಬದುಕಿನಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬದುಕಿನಲ್ಲಿ ರೂಢಿಸಿಕೊಂಡಾಗ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಕೃಷಿಯ ಜತೆಗೆ ಎಲ್ಲಾ ಉಪಕಸುಬುಗಳನ್ನು ಮಾಡುವ ಮೂಲಕ ರೈತರು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು’ ಎಂದರು.

ತುಮಕೂರು ಜಿಲ್ಲೆಯಲ್ಲಿ ಪುಷ್ಪ ಕೃಷಿಗೆ ಹೇರಳವಾದ ಅವಕಾಶವಿದ್ದು, ಜಿಲ್ಲೆಯ ಕೃಷಿಕರು ಇಂತಹ ಫಲಪುಷ್ಪ ಪ್ರದರ್ಶನವನ್ನು ನೋಡುವ ಮೂಲಕ ಇಲ್ಲಿ ಕೊಡುವ ಸಲಹೆ, ಮಾರ್ಗದರ್ಶನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಆದಾಯ ಗಳಿಸಬೇಕು. ನೀರಿನ ಮಿತ ಬಳಕೆಯ ಬಗ್ಗೆ ಗಮನ ಹರಿಸಿ ಹೂವು ತರಕಾರಿ ಮತ್ತು ಕೈತೋಟದ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ADVERTISEMENT

ಮೇಯರ್ ಫರೀದಾ ಬೇಗಂ ಮಾತನಾಡಿ, ‘ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಮಾದರಿ ಕೃಷಿಯ ಬಗ್ಗೆ ಮಾಹಿತಿ ಪಡೆದು ಹೆಚ್ಚಿನ ಆದಾಯ ಗಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.