ಬಂಧನ
(ಪ್ರಾತಿನಿಧಿಕ ಚಿತ್ರ)
ಕುಣಿಗಲ್: ತಾಲ್ಲೂಕಿನ ಯಲಿಯೂರು ಗ್ರಾಮದಿಂದ ಗುರುವಾರದಿಂದ ನಾಪತ್ತೆಯಾಗಿದ್ದ ವಿವಾಹಿತೆ ಪ್ರಿಯಾಂಕಾ (29) ತಾಲ್ಲೂಕಿನ ಗೊಟ್ಟಿಕೆರೆಯಲ್ಲಿರುವ ಸ್ನೇಹಿತ ಡೇವಿಡ್ ಮನೆಯಲ್ಲಿ ಭಾನುವಾರ ಪತ್ತೆಯಾಗಿದ್ದಾರೆ.
ಯಲಿಯೂರು ಗ್ರಾಮದ ರುದ್ರೇಶ್ ಅವರ ಪತ್ನಿ ಪ್ರಿಯಾಂಕಾ ಕಳೆದ ಬುಧವಾರ ಕೈಮರ ಗ್ರಾಮದಲ್ಲಿ ಸಂಬಂಧಿ ಮದುವೆ ಮುಗಿಸಿಕೊಂಡು ಬೇಲೂರಿಗೆ ತೆರಳಿದ್ದರು. ಗುರುವಾರ ಸಂಜೆ ಬೇಲೂರಿನಲ್ಲಿ ಹಾಸನದ ಬಸ್ ಹತ್ತುವಾಗ ಏಕಾಏಕಿ ಕಣ್ಮರೆಯಾಗಿದ್ದರು. ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದರು.
ಪ್ರಿಯಾಂಕಾ ಅವರ ಮೊಬೈಲ್ ಕರೆಗಳ ವಿವರ ಪರಿಶೀಲಿಸಿದ ಪೊಲೀಸರಿಗೆ, ಅವರು(ಪ್ರಿಯಾಂಕಾ) ಹಾಗೂ ಡೇವಿಡ್ ನಡುವಿನ ಪ್ರಣಯ ಇರುವುದು ಗೊತ್ತಾಗಿದೆ.
ತಾಲ್ಲೂಕಿನ ಅಂಚೇಪಾಳ್ಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಡೇವಿಡ್ ಹಾಗೂ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮುಗಿಸಿ ಸ್ವಗ್ರಾಮಕ್ಕೆ ಬರುತ್ತಿದ್ದ ಪ್ರಿಯಾಂಕಾ ಅವರನ್ನು ಮಾರ್ಗಮಧ್ಯೆ ಡೇವಿಡ್ ಭೇಟಿಯಾಗಿದ್ದ. ಇಬ್ಬರೂ ಸೇರಿ ಕೊಲೆ ಶಂಕೆ ಬರುವಂತೆ ಸಂಚು ರೂಪಿಸಿದ್ದರು. ಆಧಾರ್, ಪಾನ್ ಕಾರ್ಡ್ ಮತ್ತು ಬಟ್ಟೆಗಳನ್ನು ಕೆರೆ ಬಳಿ ಎಸೆದು ನಂತರ ಗೊಟ್ಟಿಕೆರೆಯಲ್ಲಿ ಡೇವಿಡ್ ವಾಸವಿದ್ದ ಬಾಡಿಗೆ ಮನೆ ಸೇರಿದ್ದರು.
ಪ್ರಿಯಾಂಕಾ ಧರಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಒಡವೆ ಜತೆ ಬಿಹಾರಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರನ್ನೂ ಪೊಲೀಸರು ಗೊಟ್ಟಿಕೆರೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಪ್ರಿಯಾಂಕಾ ಮದುವೆಗೆ ಹೋಗುವಾಗ 150- 200 ಗ್ರಾಂ ಚಿನ್ನದ ಒಡವೆ ಧರಿಸಿದ್ದರು. ಚಿನ್ನದ ಆಸೆಗೆ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಸಂಬಂಧಿಕರು ಶಂಕಿಸಿದ್ದರು. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಮಲ್ಪೆಯ ಮುಳುಗುತಜ್ಞ ಈಶ್ವರ್ ಸಹ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ಶುಕ್ರವಾರ ಬೆಳಗ್ಗೆ ಧರ್ಮಸ್ಥಳ ಪಾದಯಾತ್ರಿಗಳಿಗೆ ಕಲ್ಕೆರೆ ಕೆರೆ ಪಕ್ಕದಲ್ಲಿ ಪ್ರಿಯಾಂಕಾ ಅವರ ಆಧಾರ ಕಾರ್ಡ್ ದೊರೆತು ಸಂಬಂಧಿಗಳಿಗೆ ಮಾಹಿತಿ ನೀಡಿದ್ದರು. ನಂತರ ಪತಿ ಮತ್ತು ಸ್ನೇಹಿತರು ಕಲ್ಕೆರೆ ಕೆರೆ ಬಳಿ ಬಂದು ನೋಡಿದ್ದಾರೆ. ಅವರಿಗೆ ಪಾನ್ ಕಾರ್ಡ್, ಚಪ್ಪಲಿ ಮತ್ತು ಬಟ್ಟೆಗಳು ಬಿಡಿಬಿಡಿಯಾಗಿ ಸ್ವಲ್ಪ ದೂರದಲ್ಲಿ ಪತ್ತೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.