
ತುಮಕೂರು: ವೆನೆಜುವೆಲಾ ಅಧ್ಯಕ್ಷರ ಅಪಹರಣ ಮಾಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧೋರಣೆಯನ್ನು ಖಂಡಿಸಿ ಎಡ ಪಕ್ಷಗಳು ನಗರದಲ್ಲಿ ಗುರುವಾರ ಪ್ರತಿಭಟನೆ ವ್ಯಕ್ತಪಡಿಸಿದವು.
ಸಿಪಿಐಎಂ, ಸಿಪಿಐ, ಎಸ್ಯುಸಿಐ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಚೌಕದಲ್ಲಿ ಪ್ರತಿಭಟನೆ ನಡೆಯಿತು.
ಹೋರಾಟಗಾರ ಕೆ.ದೊರೈರಾಜ್, ‘ಜಗತ್ತಿನ ಸರ್ವಾಧಿಕಾರಿ, ಸಾಮ್ರಾಜ್ಯಶಾಹಿಗಳು ಇತಿಹಾಸದಿಂದ ಪಾಠ ಕಲಿತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ಕಡಿವಾಣ ಹಾಕಲು ಜಗತ್ತಿನ ಪ್ರಜಾಪ್ರಭುತ್ವ ರಾಷ್ಟ್ರಗಳು, ಯುದ್ಧ ವಿರೋಧಿಸುವ, ಶಾಂತಿ ಬಯಸುವ ದೇಶಗಳು ಒಗ್ಗೂಡಿ ಹೋರಾಟ ನಡೆಸಬೇಕು. ತಕ್ಷಣ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು’ ಎಂದು ಆಗ್ರಹಿಸಿದರು.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡೂರೊ ಹಾಗೂ ಅವರ ಪತ್ನಿಯನ್ನು ಅಪಹರಣ ಮಾಡಿರುವುದು ಅತ್ಯಂತ ಖಂಡನೀಯ. ಇದು ಗೂಂಡಾಗಿರಿಯ ಪ್ರವೃತ್ತಿಯಾಗಿದೆ. ಯುದ್ಧಕೋರ ಟ್ರಂಪ್ ನಡೆಯನ್ನು ಶಾಂತಿ ಬಯಸುವ ದೇಶಗಳು ಖಂಡಿಸಬೇಕು ಎಂದರು.
ಪರಿಸರವಾದಿ ಸಿ.ಯತಿರಾಜು, ‘ವೆನೆಜುವೆಲಾ ದೇಶದಲ್ಲಿರುವ ತೈಲ ಪ್ರೀತಿಯಿಂದ ಅಲ್ಲಿನ ಅಧ್ಯಕ್ಷರನ್ನು ಅಪಹರಣ ಮಾಡಲಾಗಿದೆ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್, ‘ವೆನೆಜುವೆಲಾ ಮೇಲೆ ಆಕ್ರಮಣ ನಡೆಯುತ್ತಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ವಿರೋಧಿಸದೆ ಅಂಜುಬುರುಕುತನ ತೋರುತ್ತಿದೆ’ ಎಂದು ಖಂಡಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್, ‘ಅಮೆರಿಕ ಯುದ್ಧಕೋರ ನೀತಿಯನ್ನು ನಿಲ್ಲಿಸಬೇಕು. ಅಲಿಪ್ತ ನೀತಿಗಳು ಜಾರಿಯಾಗಬೇಕು’ ಎಂದು ಆಗ್ರಹಿಸಿದರು.
ಎಸ್ಯುಸಿಐ ಮುಖಂಡರಾದ ಕಲ್ಯಾಣಿ, ‘ಅಮೆರಿಕಾಕ್ಕೆ ಯುದ್ಧ ಬೇಕಾಗಿದೆ. ದೊಡ್ಡಣ್ಣನಾಗಿಯೇ ಮೆರೆಯಬೇಕಾಗಿದೆ. ಹಾಗಾಗಿ ಟ್ರಂಪ್ ನಡೆಯನ್ನು ಎಲ್ಲರೂ ವಿರೋಧಿಸಬೇಕಾಗಿದೆ’ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಭಾರತದ ಸಾರ್ವಭೌಮತ್ವ ಕಾಪಾಡುವ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಸಿಪಿಐನ ಕಂಬೇಗೌಡ, ಎಸ್ಯುಸಿಐನ ಮಂಜುಳ, ಪ್ರಮುಖರಾದ ಎ.ಲೋಕೇಶ್, ಖಲೀಲ್, ಮಧು, ರಂಗಧಾಂಯ್ಯ, ಇಂತು, ಪಾಂಡು, ರಾಮಕೃಷ್ಣ, ಕಲ್ಪನಾ, ಗೋವಿಂದರಾಜು, ರಮೇಶ್, ರವಿಶಂಕರ್, ಅರುಣ್ಕುಮಾರ್, ರಸೂಲ್ ಸಾಬ್, ರತ್ನಮ್ಮ, ಲಕ್ಕಪ್ಪ, ಅಶ್ವಿನಿ, ಭರತ್, ಅನೂಸೂಯ ಮುಂತಾದವರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.