
ತುಮಕೂರಿನಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬಂಜಾರ(ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಆಶ್ರಯದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಿಸಲಾಯಿತು.
ತುಮಕೂರು: ಬಂಜಾರ ಭವನಕ್ಕೆ ಪೀಠೋಪಕರಣ ಸೇರಿ ಅಗತ್ಯ ಸೌಕರ್ಯ ಕಲ್ಪಿಸುವಂತೆ ಬಂಜಾರ (ಲಂಬಾಣಿ) ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ನಾರಾಯಣನಾಯ್ಕ್ ಒತ್ತಾಯಿಸಿದರು.
ನಗರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಆಚರಣೆಯಲ್ಲಿ ಮಾತನಾಡಿದರು.
ಸಮುದಾಯದ ಜನರ ಒತ್ತಡದ ಮೇರೆಗೆ ನಗರದಲ್ಲಿ ಬಂಜಾರ ಭವನ ನಿರ್ಮಿಸಲಾಗಿದೆ. ಇಲ್ಲಿಗೆ ಪೂರಕ ಸೌಲಭ್ಯ ಕಲ್ಪಿಸಬೇಕು. ಈ ಬಾರಿಯ ಬಜೆಟ್ನಲ್ಲಿ ಸಮುದಾಯಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದರು.
ಬಂಜಾರ (ಲಂಬಾಣಿ) ಸೇವಾ ಸಂಘದ ಉಪಾಧ್ಯಕ್ಷ ಕುಬೇಂದ್ರ ನಾಯಕ್, ‘ಬಂಜಾರ ಜನಾಂಗ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆ ಹೊಂದಿದೆ. ಸೇವಾಲಾಲ್ ಅವರ ತತ್ವ, ಆದರ್ಶಗಳನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಕೆಲಸವಾಗುತ್ತಿದೆ. ಬುಡಕಟ್ಟು ಸಂಸ್ಕೃತಿ ಹೊಂದಿರುವ ಬಂಜಾರ ಸಮುದಾಯ ಕೃಷಿ, ಪಶು ಸಂಗೋಪನೆ, ಕೂಲಿಯಿಂದ ಬದುಕು ನಡೆಸುತ್ತಿದೆ’ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಸೇವಾಲಾಲ್ ಸಮಾಜದಲ್ಲಿದ್ದ ಅಸಮಾನತೆ, ಮೂಢನಂಬಿಕೆಯನ್ನು ತೊಲಗಿಸಿ, ಬಂಜಾರ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವದಿಂದ ಸಮಾಜ ಕಟ್ಟಿದರು’ ಎಂದು ಸ್ಮರಿಸಿದರು.
ನಿವೃತ್ತ ಪ್ರಾಧ್ಯಾಪಕ ಡಿ.ರಾಜಾನಾಯಕ್ ವಿಶೇಷ ಉಪನ್ಯಾಸ ನೀಡಿದರು. ತಹಶೀಲ್ದಾರ್ ಪಿ.ಎಸ್.ರಾಜೇಶ್ವರಿ, ಜಿಲ್ಲಾ ಬಂಜಾರ (ಲಂಬಾಣಿ) ಸೇವಾಲಾಲ್ ಸೇವಾ ಸಂಘದ ಪದಾಧಿಕಾರಿಗಳಾದ ದೇನಾ ನಾಯಕ್, ಬಿ.ಶಂಕರ್, ರೆಡ್ಡಿನಾಯಕ್, ಸ್ವಾಮಿಲಾಲ್, ಶಂಕರ್ ಆರ್.ನಾಯಕ್, ಕೃಷ್ಣಾನಾಯಕ್, ಕಾಳಾನಾಯಕ್, ಕುಮಾರ್ ನಾಯಕ್, ದೇಸ್ಯಾ ನಾಯಕ್, ಸೇವಾಲಾಲ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಕುಬೇಂದ್ರ ನಾಯಕ್, ಮುಖಂಡರಾದ ಗಣೇಶ್ನಾಯಕ್, ಚಂದ್ರನಾಯಕ್, ಇಂದಿರಾ ದೇನಾನಾಯಕ್, ಲೋಹಿತಾಬಾಯಿ, ಹನುಮಾನಾಯಕ್, ರವೀಂದ್ರ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.