ತುಮಕೂರು: ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಮತ್ತೆ ಆರಂಭಿಸುವುದಕ್ಕೆ ಸಂಯುಕ್ತ ಹೋರಾಟ- ಕರ್ನಾಟಕ (ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ) ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಯೋಜನೆ ವಿರೋಧಿಸಿ ಆರಂಭದಿಂದಲೂ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೂ ಮತ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಖಂಡಿಸಲಾಯಿತು.
ರೈತರು, ರೈತ ಸಂಘಟನೆಗಳು, ಜನಪ್ರತಿನಿಧಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸುವಂತೆ ಒತ್ತಾಯಿಸುತ್ತಾ ಬಂದಿದ್ದೇವೆ. ಅದಕ್ಕೆ ಸ್ಪಂದಿಸದೆ, ಜನರ ಭವಣೆ, ಭಾವನೆಗಳಿಗೆ ಬೆಲೆ ಕೊಡದೆ ಏಕಪಕ್ಷೀಯವಾಗಿ ಕಾಮಗಾರಿ ಮುಂದುವರೆಸುವುದಾಗಿ ಹೇಳಿರುವುದನ್ನು ವಿರೋಧಿಸಲು ನಿರ್ಧರಿಸಲಾಯಿತು.
ಹೇಮಾವತಿಯಿಂದ ಜಿಲ್ಲೆಗೆ 24.5 ಟಿಎಂಸಿ ಅಡಿ ನೀರು ಈ ಮೊದಲು ಹಂಚಿಕೆಯಾಗಿತ್ತು. 11–07–2019ರಂದು ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ಹೇಮಾವತಿ ನಾಲಾ ವಲಯಕ್ಕೆ 25.31 ಟಿಎಂಸಿ ಅಡಿ ನೀರು ನಿಗದಿಪಡಿಸಿ ಆದೇಶಿಸಿದ್ದು, ಹೊಸದಾಗಿ ಕೆಲವು ಪ್ರದೇಶಗಳನ್ನು ಸೇರ್ಪಡೆ ಮಾಡಿದ್ದಾರೆ. ಈವರೆಗೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರು ಜಿಲ್ಲೆಗೆ ಬಂದಿಲ್ಲ. ಹಾಗಾದರೆ 25.31 ಟಿಎಂಸಿ ನೀರು ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಹೆಚ್ಚುವರಿ ಪ್ರದೇಶ ಸೇರ್ಪಡೆ ಮಾಡಿ, ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಸಂಘಟನೆ ಪ್ರಮುಖರಾದ ಎ.ಗೋವಿಂದರಾಜು, ಎಸ್.ಎನ್.ಸ್ವಾಮಿ, ಡಿ.ಸಿ.ಶಂಕರಪ್ಪ, ಕಂಬೇಗೌಡ, ಗಿರೀಶ್, ಅಜ್ಜಪ್ಪ, ಕೆ.ಎನ್.ವೆಂಕಟೇಗೌಡ, ರವೀಶ್, ಬೋರೇಗೌಡ, ಸಿ.ಯತಿರಾಜು, ಪಂಡಿತ್ ಜವಾಹರ್, ರಂಗಹನುಮಯ್ಯ, ಮಂಜುನಾಥ್, ಶಬ್ಬೀರ್, ನಾಗರತ್ನಮ್ಮ, ಸಿ.ಜಿ.ಲೋಕೇಶ್, ರಮೇಶ್, ಸಿದ್ದಗಂಗಯ್ಯ, ನಿಂಗರಾಜು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.