ADVERTISEMENT

ತುಮಕೂರು – ಯಶವಂತಪುರ ರೈಲು ಸಂಚಾರ ಆರಂಭ

ಪ್ರಯಾಣಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಸಂಸದ ಜಿ.ಎಸ್.ಬಸವರಾಜ್ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 20:29 IST
Last Updated 7 ಡಿಸೆಂಬರ್ 2020, 20:29 IST
ಬೆಂಗಳೂರು ಪ್ಯಾಸೆಂಜರ್ ರೈಲಿಗೆ ತುಮಕೂರು ನಿಲ್ದಾಣದಲ್ಲಿ ಸಂಸದ ಜಿ.ಎಸ್.ಬಸವರಾಜ್ ಚಾಲನೆ ನೀಡಿದರು
ಬೆಂಗಳೂರು ಪ್ಯಾಸೆಂಜರ್ ರೈಲಿಗೆ ತುಮಕೂರು ನಿಲ್ದಾಣದಲ್ಲಿ ಸಂಸದ ಜಿ.ಎಸ್.ಬಸವರಾಜ್ ಚಾಲನೆ ನೀಡಿದರು   

ತುಮಕೂರು: ಕೊರೊನಾ ಕಾರಣ ಕಳೆದ 9 ತಿಂಗಳಿನಿಂದ ಸ್ಥಗಿತಗೊಂಡಿದ್ದ ತುಮಕೂರು– ಯಶವಂತಪುರ ಪ್ಯಾಸೆಂಜರ್ ರೈಲು ಸಂಚಾರ ಸೋಮವಾರದಿಂದ ಆರಂಭಗೊಂಡಿದೆ.

ಬೆಳಿಗ್ಗೆ 7.30ಕ್ಕೆ ರೈಲು ಸಂಚಾರ ಆರಂಭಿಸಿದ್ದು, ನಿತ್ಯ ಬೆಂಗಳೂರಿಗೆ ಉದ್ಯೋಗಗಳಿಗೆ ತೆರಳುವವರು ಸಂತಸ
ದಿಂದಲೇ ಪ್ರಯಾಣ ಬೆಳೆಸಿದರು. ಸಂಸದ ಜಿ.ಎಸ್.ಬಸವರಾಜ್, ಪ್ರಯಾಣಿಕರಿಗೆ ಮಾಸ್ಕ್ ವಿತರಿಸುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿ, ಸದ್ಯಕ್ಕೆ ಯಶವಂತಪುರದ ಬದಲು ಕೆಂಪೇಗೌಡ ರೈಲು ನಿಲ್ದಾಣದವರೆಗೂ ಸಂಚರಿಸು
ವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸಂಪೂರ್ಣವಾಗಿ ರೈಲು ಸಂಚಾರ ಆರಂಭವಾಗುವವರೆಗೂ ಮೆಜೆಸ್ಟಿಕ್‌ವರೆಗೆ ಈ ರೈಲು ತೆರಳಲಿ. ರೈಲುಗಳ ಸಂಚಾರ ಸಂಪೂರ್ಣವಾಗಿ ಆರಂಭವಾದ ಬಳಿಕ ಯಶವಂತಪುರಕ್ಕೆ ಸೀಮಿತಗೊಳಿಸಲಿ ಎಂದರು.

ADVERTISEMENT

ಪಾಲಿಕೆ ಸದಸ್ಯೆ ಗಿರಿಜಾ, ಪ್ರಯಾಣಿಕರು ತಮ್ಮ ಆರೋಗ್ಯ ದೃಷ್ಟಿಯಿಂದ ಅಂತರ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.

ತುಮಕೂರು– ಯಶವಂತಪುರ ಪ್ಯಾಸೆಂಜರ್ ರೈಲಿಗೆ ಮಾತ್ರ ನಗರದರೈಲ್ವೆ ನಿಲ್ದಾಣದ ಕೌಂಟರ್‌ನಲ್ಲಿ ಪ್ರಯಾಣಿಕರಿಗೆ ಕಾಯ್ದಿರಿಸದ ಟಿಕೆಟ್ ವಿತರಿಸಲಾಗುತ್ತದೆ. ಉಳಿದ ಇನ್ಯಾವುದೇ ರೈಲುಗಳಿಗೆ ಕೌಂಟರ್‌ನಲ್ಲಿ ಟಿಕೆಟ್ ನೀಡುತ್ತಿಲ್ಲ. ಉಳಿದ ರೈಲುಗಳಿಗೆ ಆನ್‍ಲೈನ್‍ನಲ್ಲೇ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬೇಕು ಎಂದು ರೈಲ್ವೆ ಇಲಾಖೆ ವಾಣಿಜ್ಯ ನಿರೀಕ್ಷಕ ಧನಂಜಯ್ಯ ತಿಳಿಸಿದರು.

ಶಿವಮೊಗ್ಗ– ಬೆಂಗಳೂರು ಇಂಟರ್‌ ಸಿಟಿ, ರಾಣಿಚನ್ನಮ್ಮ, ಧಾರವಾಡ ಇಂಟರ್‌ ಸಿಟಿ ಹಾಗೂ ರಾತ್ರಿ ಹೊಸ
ಪೇಟೆ ಎಕ್ಸ್‌ಪ್ರೆಸ್‌ ರೈಲುಗಳು ಸೋಮವಾರದಿಂದ ಸಂಚಾರ ಆರಂಭಿಸಿವೆ. ಆನ್‍ಲೈನ್‍ನಲ್ಲೇ ಟಿಕೆಟ್ ಕಾಯ್ದಿರಿಸಬೇಕಾಗಿದೆ ಎಂದು ತಿಳಿಸಿದರು.

ರೈಲ್ವೆ ಇಲಾಖೆಯ ಬೆಂಗಳೂರು ವಿಭಾಗದ ಅಧಿಕಾರಿ ಲಕ್ಷ್ಮಣ್‍ಸಿಂಗ್, ಇಕ್ಬಾಲ್ ಅಹಮದ್, ನಿಲ್ದಾಣ ಅಧಿಕಾರಿ ರಮೇಶ್‍ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.