ADVERTISEMENT

ತುಮಕೂರು ವಿವಿಯಲ್ಲಿ ಮೀಸಲು: ವಿದ್ಯಾರ್ಥಿಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:26 IST
Last Updated 21 ಫೆಬ್ರುವರಿ 2026, 7:26 IST
ತುಮಕೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪ್ರಮುಖರಾದ ಕೆ.ದೊರೈರಾಜು, ಡಾ.ಬಸವರಾಜು, ವೈ.ಕೆ.ಬಾಲಕೃಷ್ಣ, ರಂಗಧಾಮಯ್ಯ, ಕೊಟ್ಟ ಶಂಕರ್, ವೈ.ಎಚ್.ಹುಚ್ಚಯ್ಯ, ರವಿಕುಮಾರ್ ನೀಹ, ಹೆತ್ತೇನಹಳ್ಳಿ ಮಂಜುನಾಥ್, ಶಿವಣ್ಣ ತಿಮ್ಮಲಾಪುರ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪ್ರಮುಖರಾದ ಕೆ.ದೊರೈರಾಜು, ಡಾ.ಬಸವರಾಜು, ವೈ.ಕೆ.ಬಾಲಕೃಷ್ಣ, ರಂಗಧಾಮಯ್ಯ, ಕೊಟ್ಟ ಶಂಕರ್, ವೈ.ಎಚ್.ಹುಚ್ಚಯ್ಯ, ರವಿಕುಮಾರ್ ನೀಹ, ಹೆತ್ತೇನಹಳ್ಳಿ ಮಂಜುನಾಥ್, ಶಿವಣ್ಣ ತಿಮ್ಮಲಾಪುರ ಇತರರು ಭಾಗವಹಿಸಿದ್ದರು   

ತುಮಕೂರು: ಉದ್ಯೋಗ ನೇಮಕಾತಿ ಸಮಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವಾಗಿ ಪರಿಗಣಿಸಿ ಮೀಸಲಾತಿ ನಿಗದಿಪಡಿಸುವ (ರೋಸ್ಟರ್) ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಸಂಬಂಧ ರಾಜ್ಯ ಸಚಿವ ಸಂಪುಟ ಉಪಸಮಿತಿ ನೀಡಿರುವ ತಾತ್ವಿಕ ಒಪ್ಪಿಗೆಯು ಅಸಂವಿಧಾನಿಕ ಹಾಗೂ ಮೀಸಲಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರವಾಗಿದೆ ಎಂದು ‘ತುಮಕೂರು ವಿಶ್ವವಿದ್ಯಾಲಯ ಸಾಮಾಜಿಕ ನ್ಯಾಯ ಪರ ವಿದ್ಯಾರ್ಥಿಗಳ ಒಕ್ಕೂಟ’ ಟೀಕಿಸಿದೆ.

ನಗರದಲ್ಲಿ ಶುಕ್ರವಾರ ಒಕ್ಕೂಟದ ವತಿಯಿಂದ ನಡೆದ ದುಂಡುಮೇಜಿನ ತುರ್ತು ಸಭೆಯಲ್ಲಿ ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ರೂಪಿಸಲು ನಿರ್ಧರಿಸಲಾಯಿತು. ಈ ನಿರ್ಧಾರವನ್ನು ತಕ್ಷಣ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.

ADVERTISEMENT

ವಕೀಲ ರಂಗಧಾಮಯ್ಯ, ‘ನೇಮಕಾತಿಯಲ್ಲಿ ವಿಶ್ವವಿದ್ಯಾಲಯವನ್ನು ಘಟಕವನ್ನಾಗಿ ಪರಿಗಣಿಸುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅಲಹಾಬಾದ್ ಹೈಕೋರ್ಟ್, ಸುಪ್ರೀಂ ಕೋರ್ಟ್ ಸಹ ವಿ.ವಿ.ಗಳನ್ನು ಘಟಕವಾಗಿ ಪರಿಗಣಿಸಬಾರದು ಎಂದು ತೀರ್ಪು ನೀಡಿವೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆ ಕೊಡದೆ ರಾಜ್ಯ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುವುದು ಸಾಮಾಜಿಕ ನ್ಯಾಯಕ್ಕೆ ಬಗೆಯುವ ದ್ರೋಹವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ವೈ.ಕೆ.ಬಾಲಕೃಷ್ಣ, ‘ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಇರಬೇಕಾದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೇ ಮೀಸಲಾತಿ ವಿರೋಧಿ ಕಾನೂನು ರೂಪಿಸಲು ಮುಂದಾಗಿರುವುದು ದುರಂತ. ಈ ಬಗ್ಗೆ ಹೋರಾಟ ನಡೆಸುವ ಅಗತ್ಯವಿದೆ’ ಎಂದರು.

ವಿದ್ಯಾರ್ಥಿ ಒಕ್ಕೂಟದ ಮುಖಂಡರಾದ ಗಂಗಾಧರ್ ಬಾಣಸಂದ್ರ, ಪಿ.ಆರ್.ನವೀನ್ ಕುಮಾರ್, ಧರ್ಮಣ್ಣ, ಎಂ.ರಂಗನಾಥ್, ಎಂ.ಟಿ.ರಮೇಶ್, ಮಾರುತೇಶ್, ಸುರೇಶ್ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರಾದ ಕೆ.ದೊರೈರಾಜು, ಡಾ.ಬಸವರಾಜು, ಕೊಟ್ಟ ಶಂಕರ್, ವೈ.ಎಚ್.ಹುಚ್ಚಯ್ಯ, ರವಿಕುಮಾರ್ ನೀಹ, ರಾಮಯ್ಯ, ಹೆತ್ತೇನಹಳ್ಳಿ ಮಂಜುನಾಥ್, ಪವನ್, ಶಿವಣ್ಣ ತಿಮ್ಮಲಾಪುರ, ಜಯರಾಮ್, ನಟರಾಜ್, ಶ್ರೀನಿವಾಸ್ ಮುಂತಾದವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.