ತುಮಕೂರು: ವರ್ಕ್ಫ್ರಮ್ ಹೋಮ್ ಆಮಿಷಕ್ಕೆ ಒಳಗಾಗಿ ಕುಣಿಗಲ್ ಪಟ್ಟಣದ ಎಸ್.ವಿ.ಪ್ರಭಾಕರ್ ₹8.47 ಲಕ್ಷ ಮೋಸ ಹೋಗಿದ್ದಾರೆ.
ಪ್ರಭಾಕರ್ ವೃತ್ತಿಯಲ್ಲಿ ಚಾಲಕರು. ವಾಟ್ಸ್ ಆ್ಯಪ್ ಮುಖಾಂತರ ಮೆಸೇಜ್ ಮಾಡಿದ ಆರೋಪಿಗಳು ಕೆಲಸದ ಬಗ್ಗೆ ತಿಳಿಸಿದ್ದಾರೆ. ‘ನಾವು ಹೇಳಿದಂತೆ ಹಣ ವರ್ಗಾಯಿಸಿದರೆ ಅದನ್ನು ನಾವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಲಾಭ ಗಳಿಸಿ ನಿಮಗೆ ನೀಡುತ್ತೇವೆ’ ಎಂದಿದ್ದಾರೆ.
ಮೊದಲಿಗೆ ₹2 ಸಾವಿರ ವರ್ಗಾಯಿಸಿದ್ದು, ಅವರ ಖಾತೆಗೆ ₹2,800 ವಾಪಸ್ ಹಾಕಿದ್ದಾರೆ. ಇದನ್ನು ನಂಬಿದ ಪ್ರಭಾಕರ್ ಹಂತ ಹಂತವಾಗಿ ಒಟ್ಟು ₹8.47 ಲಕ್ಷ ವರ್ಗಾವಣೆ ಮಾಡಿದ್ದಾರೆ. ಹಣ ವಾಪಸ್ ಕೇಳಿದಾಗ ಇನ್ನೂ ₹5 ಲಕ್ಷ ವರ್ಗಾಯಿಸುವಂತೆ ಕೋರಿದ್ದಾರೆ. ಇದರಿಂದ ಅನುಮಾನ ಬಂದು ಸ್ನೇಹಿತರಲ್ಲಿ ವಿಚಾರಿಸಿ, ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.