
ತುರುವೇಕೆರೆ: ತಾಲ್ಲೂಕಿನ ಹಲವೆಡೆ ಕೋಟ್ಯಂತರ ರೂಪಾಯಿ ಸರ್ಕಾರಿ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಪರಭಾರೆ ಮಾಡಿರುವ ಸಂಬಂಧ ಬಂದಿರುವ ದೂರಿನ ಮೇರೆಗೆ ಜಿಲ್ಲಾ ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಗುರುವಾರ ಬೆಳಗ್ಗೆಯೇ ತಾಲ್ಲೂಕು ಕಚೇರಿಗೆ ಬಂದಿಳಿದ ಲೋಕಾಯುಕ್ತ ಪೊಲೀಸರು ಸುಳ್ಳು ದಾಖಲೆ ಸೃಷ್ಟಿಸಿರುವ ಕುರಿತು ತಾಲ್ಲೂಕು ಕಚೇರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಸಂಬಂಧಿಸಿದ ಭೂಮಿಗಳ ದಾಖಲೆ ಪರಿಶೀಲಿಸಿದರು.
ತಾಲ್ಲೂಕಿನ ನರಿಗೇಹಳ್ಳಿ, ಲೆಂಕನಹಳ್ಳಿ, ದೇವನಾಯಕನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿದ್ದ ಸರ್ಕಾರಿ ಭೂಮಿಯನ್ನು ಕೆಲವು ಅಧಿಕಾರಿಗಳು, ಮಧ್ಯವರ್ತಿಗಳು ಸೇರಿದಂತೆ ಹಲವರು ಲಕ್ಷಾಂತರ ಹಣ ಪಡೆದು ಬೇರೆಯವರಿಗೆ ಪರಭಾರೆ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.
ಈ ನಕಲಿ ದಾಖಲೆಗಳನ್ನು 2018-19ರಲ್ಲಿ ಸೃಷ್ಟಿಸಲಾಗಿದೆ. 1995ರಲ್ಲೇ ಈ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ನಕಲಿ ಪತ್ರವನ್ನೂ ಸಹ ಸೃಷ್ಟಿಸಿ ಪರಭಾರೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಹಲವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ತಹಶೀಲ್ದಾರ್ ಆಗಿದ್ದ ನಾಗರಾಜ್, ಸಿಬ್ಬಂದಿ ಕಲ್ಲೇಶ್ ಮತ್ತು ತಿಪಟೂರು ಉಪವಿಭಾಗಾಧಿಕಾರಿ ಕಚೇರಿಯ ಕೆಲ ಸಿಬ್ಬಂದಿ ಮತ್ತು ತುರುವೇಕೆರೆ ಕೆಲವು ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲಾ ಲೋಕಾಯುಕ್ತ ಎಸ್ಪಿ ಎ.ವಿ. ಲಕ್ಷ್ಮಿನಾರಾಯಣ್, ಇನ್ಸ್ಪೆಕ್ಟರ್ ಸಲೀಂ ಅಹಮದ್ ಮತ್ತು ಸಬ್ಇನ್ಸ್ಪೆಕ್ಟರ್ ಟಿ.ರಾಜು ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.