ತುರುವೇಕೆರೆ: ತಾಲ್ಲೂಕಿನಲ್ಲಿ 15 ಸಾವಿರ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ಹೇಳಿದರು.
ತಾಲ್ಲೂಕಿನ ಕಸಬಾ ವ್ಯಾಪ್ತಿಯ ಮಾದಿಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆವರಣದಲ್ಲಿ ಆ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿರುವ ರಾಸುಗಳಿಗೆ ವಿಮೆ ಮಾಡಿಸುವ ಸಲುವಾಗಿ ರಾಸುಗಳ ಕಿವಿಗಳಿಗೆ ಓಲೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಸುಮಾರು 15 ಸಾವಿರ ರಾಸುಗಳಿಗೆ ಜಿಲ್ಲಾ ಹಾಲು ಒಕ್ಕೂಟದಿಂದ ಮಾಡಿಸಲಾಗುತ್ತಿದೆ. ರಾಸುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಮೆ ಮಾಡಿಸಲಾಗುತ್ತಿದೆ. ಈ ಹಿಂದೆ ₹10 ಸಾವಿರದಿಂದ ₹60 ಸಾವಿರದ ವರೆಗೆ ವಿಮೆ ಇತ್ತು. ಆದರೆ ಈ ಬಾರಿಯಿಂದ ₹10 ಸಾವಿರದಿಂದ ₹70 ಸಾವಿರದವರೆಗೆ ವಿಮೆ ಸೌಲಭ್ಯ ವಿಸ್ತರಿಸಲಾಗಿದೆ ಎಂದರು.
ತಾಲ್ಲೂಕಿನಲ್ಲಿ ಈ ವಿಮೆ ಮಾಡಿಸಲು ನಾಲ್ಕು ತಿಂಗಳು ಕಾಲಾವಕಾಶ ವಿದೆ. ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಇದಕ್ಕಾಗಿ ಈ ಬಾರಿ ₹30 ಕೋಟಿಯನ್ನು ಬಜೆಟ್ನಲ್ಲಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಇನ್ನೂರಕ್ಕೂ ಹೆಚ್ಚು ರಾಸುಗಳಿಗೆ ವಿಮೆ ಮಾಡಿಸಲಾಯಿತು.
ಮಾದಿಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶೋಭಾ ಮಂಜುನಾಥ್, ಉಪಾಧ್ಯಕ್ಷೆ ಗೌರಮ್ಮ ಗಂಗಾಧರ್, ಸುಶೀಲಮ್ಮ, ಕಲಾವತಿ, ರೂಪಶ್ರೀ, ರತ್ನಮ್ಮ, ಜ್ಯೋತಿ, ಕೆಂಪದೇವಮ್ಮ, ನೀಲಮ್ಮ, ಕವಿತಾ, ಮಹಾಲಕ್ಷ್ಮಮ್ಮ, ಕಾರ್ಯದರ್ಶಿ ವಿಶಾಲಾಕ್ಷಿ, ಗ್ರಾಮಸ್ಥರಾದ ಎಂ.ವಿ.ಕುಮಾರ್, ಗಂಗಾಧರ್, ಕೆಂಪೇಗೌಡ, ಬಾಲರಾಜ್. ಶಿವಕುಮಾರ್, ವಿಸ್ತರಣಾಧಿಕಾರಿಗಳಾದ ಮಂಜುನಾಥ್, ಕಿರಣ್, ದಿವಾಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.