ಚಿಕ್ಕನಾಯಕನಹಳ್ಳಿ: ಪಟ್ಟಣದ ಮೂಲಕ ಹಾದುಹೋಗುವ ಮೈಸೂರು-ಜೇವರ್ಗಿ ಹೆದ್ದಾರಿ ಮಾರ್ಗ ಮಧ್ಯದ ಆಲದಕಟ್ಟೆ, ಸಾಲ್ಕಟ್ಟೆ ಭಾಗದಲ್ಲಿ ಅಪಘಾತಗಳು ದಿನೇ, ದಿನೇ ಹೆಚ್ಚುತ್ತಿವೆ. ಈ ಹೆದ್ದಾರಿ ಅವೈಜ್ಞಾನಿಕವಾಗಿರುವುದೇ ಇದಕ್ಕೆ ಕಾರಣ ಎಂದು ಟ್ಯಾಕ್ಸಿ ಚಾಲಕರ ಸಂಘ ದೂರಿದೆ.
ಪಟ್ಟಣದಿಂದ ಹುಳಿಯಾರು ಮಾರ್ಗವಾಗಿ ಸಾಗುವ ಮೈಸೂರು-ಜೇವರ್ಗಿ ಹೆದ್ದಾರಿಯ ಎರಡು ಬದಿಯ ಪಥ ಸಮತಟ್ಟಾಗಿಲ್ಲ. ಎಡಬದಿ ರಸ್ತೆ ತುಸು ಎತ್ತರಕ್ಕಿದ್ದರೆ, ಬಲಬದಿ ಕೊಂಚ ತಗ್ಗಾಗಿದೆ. ಭಾರಿ ವಾಹನ, ಸರಕು ಸಾಗಣೆಯ ವಾಹನ ಏಕಾಏಕಿ ಒಂದು ಕಡೆಗೆ ವಾಲಿಕೊಂಡು ಆಯತಪ್ಪಿ ಪಲ್ಟಿ ಹೊಡೆಯುತ್ತಿವೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದು, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಎಫ್.ಕೆ. ನದಾಫ್ ಈ ರಸ್ತೆಯಲ್ಲಿ ಜೀಪ್ ಚಾಲನೆ ಮಾಡಿ, ರಸ್ತೆ ನಿರ್ಮಾಣದ ಏರು-ಪೇರುಗಳನ್ನು ಅನುಭವಿಸಿದ್ದಾರೆ. ಟ್ಯಾಕ್ಸಿ ಚಾಲಕರ ಸಂಘ ಹಾಗೂ ಸ್ಥಳೀಯರ ಒತ್ತಾಯಕ್ಕೆ ಮಣಿದ ಪೊಲೀಸ್ ಇಲಾಖೆ ಮೇಲಧಿಕಾರಿಗಳು ಈ ರಸ್ತೆಗೆ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮೃತ್ಯುಂಜಯ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರ ಕಂಪನಿಗೆ ಪತ್ರ ಬರೆದಿದ್ದಾರೆ.
‘ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ವೈಜ್ಞಾನಿಕವಾಗಿ ರಸ್ತೆಯ ಮರುಪರಿಶೀಲನೆ ನಡೆಸಿ ಲೋಪಗಳನ್ನು ಶೀಘ್ರ ಸರಿಪಡಿಸಬೇಕು’ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೃತ್ಯುಂಜಯ ಪ್ರತಿಕ್ರಿಯಿಸಿ, ‘ಶೀಘ್ರವೇ ರಸ್ತೆ ಸಮರ್ಪಕ ದುರಸ್ತಿ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು’ ಎಂದಿದ್ದಾರೆ.
ಸಾರ್ವಜನಿಕರು ರಸ್ತೆ ತೆರಿಗೆ ಟೋಲ್ ಸುಂಕವನ್ನೂ ಪಾವತಿಸುತ್ತೇವೆ. ಆದಾಗ್ಯೂ ವ್ಯವಸ್ಥಿತ ರಸ್ತೆ ಸಿಗುವುದು ಮರೀಚಿಕೆಯಾಗಿದೆ. ಇಂತಹ ಸಮತಟ್ಟಾಗಿ ಇಲ್ಲದ ರಸ್ತೆ ಸಂಚಾರ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಇದಕ್ಕೆ ಹೊಣೆ ಯಾರು?ಮಹಮದ್ ಹುಸೇನ್ ಗುಂಡಾ, ರಾಜ್ಯ ಟ್ಯಾಕ್ಸಿ ಚಾಲಕರ ಸಂಸ್ಥೆ ಜಂಟಿ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.