ADVERTISEMENT

‘ಉತ್ತಮ ಸಮಾಜಕ್ಕೆ ವೀರಶೈವರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 3:09 IST
Last Updated 4 ಜನವರಿ 2021, 3:09 IST
ಗುಬ್ಬಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಂದ್ರಶೇಖರ ಸ್ವಾಮೀಜಿ ಇದ್ದರು
ಗುಬ್ಬಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಚಂದ್ರಶೇಖರ ಸ್ವಾಮೀಜಿ ಇದ್ದರು   

ಗುಬ್ಬಿ: ‘ಸಮಾಜಕ್ಕೆ ಒಳಿತು ಬಯಸುವ ಸಂಘಟನೆಗಳು ಜಾತಿ ಲೇಪನ ಮಾಡಿಕೊಳ್ಳುವುದು ಸೂಕ್ತವಲ್ಲ. ಮಾನವೀಯ ಧರ್ಮದೊಟ್ಟಿಗೆ ನಿಲುವು ತಾಳಬೇಕು’ ಎಂದು ಸಂಸದ ಜಿ.ಎಸ್.ಬಸವರಾಜು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿಶ್ವ ಧರ್ಮವಾಗಿರುವ ವೀರಶೈವ ಲಿಂಗಾಯಿತ ಧರ್ಮ ಪರಿಪಾಲನೆ ಜತೆಗೆ ಅನ್ಯ ಸಮಾಜವನ್ನು ಒಗ್ಗೂಡಿಸಿ ಬೆರೆಯಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು. ಮೀಸಲಾತಿ ಬಗ್ಗೆ ವೈಯಕ್ತಿಕ ಅಭಿಪ್ರಾಯ ಮಂಡಿಸಿ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚಿಸಬೇಕಿದೆ. ಈ ಬಗ್ಗೆ ಏಕಾಏಕಿ ನಿರ್ಧಾರ ಸಲ್ಲದು’ ಎಂದರು.

ADVERTISEMENT

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಭೃಂಗೇಶ್ ಮಾತನಾಡಿ, ‘ದಾಸೋಹ ಪರಿಕಲ್ಪನೆ ಪರಿಚಯಿಸಿದ ಶರಣರ ತತ್ವ ನಿಜಕ್ಕೂ ಅರ್ಥಪೂರ್ಣವಾಗಿದೆ. ತ್ರಿವಿಧ ದಾಸೋಹ ಮಂತ್ರ ಹೇಳುವ ವೀರಶೈವ ಲಿಂಗಾಯಿತ ಧರ್ಮ ಮಾನವೀಯತೆ ಪ್ರತಿಪಾದಿಸುತ್ತದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ವೀರಶೈವ ಧರ್ಮದ ಪಾಲು ಸಾಕಷ್ಟಿದೆ’ ಎಂದರು.

ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ತತ್ವಜ್ಞಾನಿಗಳ ಚಿಂತನೆ ಮೈಗೂಡಿಸಿಕೊಂಡು ಯುವ ಪೀಳಿಗೆ ಬೆಳೆಯಬೇಕಿದೆ. ರಾಜಕಾರಣಿಗಳನ್ನು ಆದರ್ಶವಾಗಿಟ್ಟುಕೊಳ್ಳದೇ ಉತ್ತಮ ಚಿಂತನೆ ಮಾನವೀಯ ಧರ್ಮವನ್ನು ಕಲಿಸುವ ವೀರಶೈವ ಲಿಂಗಾಯಿತ ಧರ್ಮ ಕಾಪಾಡಬೇಕು’ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಮಾತನಾಡಿದರು. ಜಿ.ಪಂ. ಸದಸ್ಯೆ ಡಾ.ನವ್ಯಾಬಾಬು, ತಾಪಂ ಉಪಾಧ್ಯಕ್ಷೆ ಮಂಜುಳಾ ಪಂಚಾಕ್ಷರಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ತಹಶೀಲ್ದಾರ್ ಡಾ.ಪ್ರದೀಪ್‌ಕುಮಾರ್ ಹಿರೇಮಠ, ವಕೀಲ ಜಿ.ಎಸ್.ಪ್ರಸನ್ನಕುಮಾರ್, ಬಿಇಒ ಎನ್.ಸೋಮಶೇಖರ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಯೋಗಾನಂದ್, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಹೇರೂರು ರಮೇಶ್, ವೀರಶೈವ ಲಿಂಗಾಯಿತ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ತಿಪ್ಪೂರು ಸಿದ್ದಲಿಂಗಮೂರ್ತಿ, ಶುಭೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜಶೇಖರ್, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಶಿವಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಡಿ.ಎಸ್.ಗಂಗಾಧರ್, ಕಾರ್ಯದರ್ಶಿ ಕೆ.ಎಂ.ರವೀಶ್, ಖಜಾಂಚಿ ಎಚ್.ಜಿ.ಜಗದೀಶ್, ಉಪಾಧ್ಯಕ್ಷರಾದ ಕೆ.ವಿ.ದಯಾನಂದ್, ಎಂ.ಬಿ.ಕುಮಾರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.