ತುಮಕೂರು: ಭೂ ಪರಿವರ್ತನೆ ಮಾಡಿಸಿಕೊಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆ ಇಟ್ಟು, ಹಣದ ಸಹಿತ ಸಿಕ್ಕಿಬಿದ್ದ ಗ್ರಾಮ ಸಹಾಯಕ ಎಂ.ಎಚ್.ಕೆಂಪರಾಜು ಎಂಬುವವರಿಗೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 4 ವರ್ಷ ಸಾಮಾನ್ಯ ಸಜೆ ಮತ್ತು ₹20 ಸಾವಿರ ದಂಡ ವಿಧಿಸಿದೆ.
ನಗರದ ವಿದ್ಯಾನಗರ ನಿವಾಸಿಯೊಬ್ಬರ ಹೆಸರಲ್ಲಿದ್ದ ಯಲ್ಲಾಪುರ ಗ್ರಾಮದ ನಿವೇಶನವನ್ನು ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆ ಮಾಡಿಕೊಡುವುದಾಗಿ ಹೇಳಿ, ತುಮಕೂರು ಗ್ರಾಮಾಂತರ ವ್ಯಾಪ್ತಿಯ ಕಂದಾಯ ನಿರೀಕ್ಷಕ ಕಚೇರಿಯ ಗ್ರಾಮ ಸಹಾಯಕ ಎಂ.ಎಚ್.ಕೆಂಪರಾಜು ₹5 ಸಾವಿರ ಲಂಚದ ಹಣವನ್ನು ಪಡೆದುಕೊಂಡು ಹಣದ ಸಹಿತ ಸಿಕ್ಕಿ ಬಿದ್ದಿದ್ದರು. ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪೊಲೀಸ್ ಉಪಾಧೀಕ್ಷಕ ಜೆ.ಮೋಹನ್ ತನಿಖೆ ಕೈಗೊಂಡಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಶೇಖರಪ್ಪ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್.ಸುದಿಂದ್ರನಾಥ್ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಅಭಿಯೋಜಕರಾಗಿ ಎನ್.ಬಸವರಾಜು ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.