ADVERTISEMENT

ಕೊರಟಗೆರೆ: 8 ವರ್ಷಗಳಿಂದ ಒಣಗಿಲ್ಲ ಗಟ್ಲಹಳ್ಳಿ ಕೆರೆ

ಎಚ್.ಜೆ.ಪದ್ಮರಾಜು
Published 21 ಮೇ 2019, 5:18 IST
Last Updated 21 ಮೇ 2019, 5:18 IST
ತೋವಿನಕೆರೆ ಸಮೀಪದ ಗಟ್ಲಹಳ್ಳಿ ಕೆರೆಯಲ್ಲಿ ಕಡು ಬೇಸಿಗೆಯಲ್ಲಿಯೂ ಸಮೃದ್ಧ ನೀರು (ಎಡಚಿತ್ರ). ಕೆರೆಯ ಸಮೀಪದ ನೆಲದ ಮೇಲೆ ಮರಳು ಬೋರ್ ಹಾಕುತ್ತಿರುವುದು
ತೋವಿನಕೆರೆ ಸಮೀಪದ ಗಟ್ಲಹಳ್ಳಿ ಕೆರೆಯಲ್ಲಿ ಕಡು ಬೇಸಿಗೆಯಲ್ಲಿಯೂ ಸಮೃದ್ಧ ನೀರು (ಎಡಚಿತ್ರ). ಕೆರೆಯ ಸಮೀಪದ ನೆಲದ ಮೇಲೆ ಮರಳು ಬೋರ್ ಹಾಕುತ್ತಿರುವುದು   

ತೋವಿನಕೆರೆ: ಕೊರಟಗೆರೆ ತಾಲ್ಲೂಕು ನಿರಂತರವಾಗಿ ಬರಗಾಲದಿಂದ ತತ್ತರಿಸುತ್ತಿದ್ದು, ಹೆಚ್ಚಿನ ಕೆರೆಗಳು ನೀರಿಲ್ಲದೆ ಒಣಗಿವೆ. ಆಶ್ಚರ್ಯವೆಂದರೆ ತಾಲ್ಲೂಕಿನ ಗಟ್ಲಹಳ್ಳಿ ಕೆರೆ ಎಂಟು ವರ್ಷಗಳಿಂದ ನೀರು ತುಂಬಿಕೊಂಡು ಗಮನ ಸೆಳೆದಿದೆ.

ಗಟ್ಲಹಳ್ಳಿ ಕೆರೆಯು ನಿರಂತರವಾಗಿ ತುಂಬಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಒಣಗಿಲ್ಲ. ಹಳ್ಳದ ದಡಗಳ ಸಮೀಪ ಮರಳು ಬೋರ್‌ಗಳು ಕೇವಲ 20-30 ಅಡಿಗಳನ್ನು ಕೊರೆಯಿಸಿದರೆ ಸಾಕು ಸಮೃದ್ಧಿಯಾದ ನೀರು ಸಿಗುತ್ತದೆ. ಐವತ್ತಕ್ಕೂ ಹೆಚ್ಚು ಈ ರೀತಿಯ ಮರಳಿನ ಕೊಳವೆ ಬಾವಿಗಳು ಕೃಷಿಗೆ ನೀರು ಕೊಡುತ್ತಿವೆ. ರೈತರು, ಅಡಿಕೆ, ತೆಂಗು, ತರಕಾರಿ, ಹೂವಿನ ಬೇಸಾಯ ಮಾಡುತ್ತಿದ್ದಾರೆ.

ಕೆರೆಯ ಸುತ್ತಮುತ್ತಲಿನ ಪ್ರದೇಶವು ಬೆಟ್ಟದಿಂದ ಕೂಡಿದ್ದು, ಅಲ್ಪ ಸ್ವಲ್ಪ ಮಳೆ ಬಂದರೆ ಸಾಕು ಕೆರೆಗೆ ನೀರು ಬರುತ್ತದೆ. ಕೆರೆಯ ವಿಸ್ತೀರ್ಣ 90 ಎಕರೆ ಇದ್ದು, ಅಚ್ಚುಕಟ್ಟು ಪ್ರದೇಶ 250 ಎಕರೆ ಇದೆ.

ADVERTISEMENT

ಸರ್ಕಾರಿ ಆದೇಶದಂತೆ 8 ವರ್ಷಗಳ ಹಿಂದೆ ಕೆರೆಗಳ ತೂಬನ್ನು ಎತ್ತಿ ನೀರನ್ನು ಹೊರ ಬಿಡದಂತೆ ಆದೇಶ ಮಾಡಿ ತೂಬಿಗೆ ಮಣ್ಣು ಹಾಕಿ ಮುಚ್ಚಿಸಲಾಗಿತ್ತು ಹಾಗಾಗಿ ಇಲ್ಲಿ ಶೇಖರಣೆಗೊಂಡ ನೀರು ಹೋರ ಹೋಗಿಲ್ಲ. ಅಲ್ಲದೆ ಕೆರೆ ಅಂಗಳ ಪೂರ್ತಿಯಾಗಿ ತಲಪುರಿಗೆಯ ಕಣ್ಣುಗಳನ್ನು ಹೊಂದಿದೆ. ಕೆಲವು ದಶಕಗಳ ಹಿಂದೆ ಇಲ್ಲಿನ ತಲಪುರಿಗೆಗಳು ಕೃಷಿಕರ ಜೀವನಾಡಿಯಾಗಿದ್ದವು.

ಕೆರೆಯು ಸಂಪೂರ್ಣವಾಗಿ ಮರಳಿನಿಂದ ಕೂಡಿದೆ. ಯಾರು ಮರಳನ್ನು ಎತ್ತಿಕೊಂಡು ಹೊಗುವಂತಿಲ್ಲ. ಕೆರೆ ಅಂಗಳದಲ್ಲಿ 30 ಅಡಿಗೂ ಹೆಚ್ಚು ಆಳದವರೆಗೆ ಮರಳು ತುಂಬಿದೆ. ಮರಳಿಗೆ ಕೈ ಹಾಕಿ ಸ್ವಲ್ಪ ಅಳ ತೋಡಿದರೆ ತೇವಾಂಶ ಕಂಡು ಬರುತ್ತದೆ ಎನ್ನುತ್ತಾರೆ ಕುರಿಗಾಹಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.