ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುತಿ ನಗರ ವಾರ್ಡ್ನಲ್ಲಿ ಕನಿಷ್ಠ ಮೂರು ದಿನಗಳಿಗೊಮ್ಮೆಯಾದರೂ ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಮಹಿಳೆಯರು ಪಂಚಾಯಿತಿ ಕಚೇರಿ ಮುಂದೆ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಮಾರುತಿನಗರ ವಾರ್ಡ್ನಲ್ಲಿ ಎರಡು ತಿಂಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಇಲ್ಲಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಕೊಳವೆ ಬಾವಿಯಲ್ಲಿ ನೀರಿಲ್ಲದ ಕಾರಣ ಸಂಕಷ್ಟ ಪ್ರಾರಂಭವಾಗಿದೆ. ಟ್ಯಾಂಕರ್ ಮೂಲಕ ವಾರಕ್ಕೆ ಒಮ್ಮೆ ಪ್ರತಿ ಮನೆಗೆ ಎಂಟು ಬಿಂದಿಗೆ ನೀರು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಯುಗಾದಿ ಕಳೆದು ನಾಲ್ಕು ದಿನವಾದರೂ ನೀರು ಪೂರೈಕೆ ಮಾಡಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಖಾಲಿ ಕೊಡ ತಂದು ಪ್ರತಿಭಟನೆ ನಡೆಸಿದರು.
ಪಿಡಿಒ ಶಿವಶಂಕರ್ ಅವರು ಎಇಇ ಮಂಜು ಪ್ರಸಾದ್ ಜೊತೆ ಮಾತನಾಡಿ, ಎರಡು ದಿನದೊಳಗೆ ಹೊಸದಾಗಿ ಕೊಳವೆ ಬಾವಿ ಕೊರೆಸಿ ಶಾಶ್ವತವಾಗಿ ನೀರು ಕೊಡಲಾಗುವುದು. ಅದುವರೆಗೆ ನಿತ್ಯ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಮಹಿಳೆಯರು ಪ್ರತಿಭಟನೆ ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.