ADVERTISEMENT

ಮದಲೂರು ಕೆರೆಗೆ ನೀರು ಸ್ಥಗಿತ: ಆಕ್ರೋಶ

ಉಪ ಚುನಾವಣೆ ಗೆಲುವಿಗೆ ಅಸ್ತ್ರವಾಗಿದ್ದ ಕೆರೆ, ಪ್ರತಿಕ್ರಿಯಿಸದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 4:02 IST
Last Updated 12 ಜನವರಿ 2021, 4:02 IST
ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹರಿಯುವ ನಾಲೆಯಲ್ಲಿ ನೀರು ನಿಲ್ಲಿಸಿರುವುದು
ಶಿರಾ ತಾಲ್ಲೂಕಿನ ಮದಲೂರು ಕೆರೆಗೆ ಹರಿಯುವ ನಾಲೆಯಲ್ಲಿ ನೀರು ನಿಲ್ಲಿಸಿರುವುದು   

ಶಿರಾ: ತಾಲ್ಲೂಕಿನ ಮದಲೂರು ಕೆರೆಗೆ ಹರಿಯುತ್ತಿದ್ದ ಹೇಮಾವತಿ ನೀರನ್ನು ಭಾನುವಾರದಿಂದ ಸ್ಥಗಿತಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ವಿಧಾನಸಭೆಯ ಉಪ ಚುನಾವಣೆಯಲ್ಲಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ಚುನಾವಣೆಯಲ್ಲಿ ಗೆಲುವು ಪಡೆದಿತ್ತು.

ನವಂಬರ್ 30 ರಂದು ಮದಲೂರು ಕೆರೆಗೆ ನೀರು ಹರಿಸುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದರು. ಜೊತೆಗೆ ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ನೀರು ಹರಿಯುತ್ತಿರುವುದು ಹಾಗೂ ಮದಲೂರು ಕೆರೆಯಲ್ಲಿ ಸಂಗ್ರಹವಾಗಿರುವ ಚಿತ್ರಗಳನ್ನು ಹಾಕುವ ಮೂಲಕ ವಿಷಯವನ್ನು ಜೀವಂತವಾಗಿಟ್ಟುಕೊಂಡಿದ್ದರು.

ADVERTISEMENT

ವಿಧಾನಸಭೆಯ ಉಪಚುನಾವಣೆಯ ಪ್ರಚಾರಕ್ಕೆ ಮದಲೂರು ಗ್ರಾಮಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನು 6 ತಿಂಗಳಲ್ಲಿ ಮದಲೂರು ಕೆರೆಯನ್ನು ತುಂಬಿಸಿ ನಾನೇ ಬಂದು ಬಾಗಿನ ಅರ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಕೇವಲ 2 ತಿಂಗಳ ನೀರು ಕೆರೆಯಲ್ಲಿ ಸಂಗ್ರಹವಾಗಿರುವ ಸಮಯದಲ್ಲಿ ನೀರು ನಿಲ್ಲಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಅಜ್ಜೇನಹಳ್ಳಿ, ಭೂಪಸಂದ್ರ, ಮಾಯಸಂದ್ರ ಈ ಭಾಗ ಜನರು ನಾಲೆಗೆ ಪೈಪ್ ಹಾಕಿ ನೀರನ್ನು ಅವರ ಊರುಗಳ ಕೆರೆಗಳಿಗೆ ಹರಿಸಿಕೊಳ್ಳುತ್ತಿರುವುದರಿಂದ ಮದಲೂರು ಕೆರೆಗೆ ನೀರು ಹರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈ ವಿಷಯ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಲುಪಿದೆ ಎನ್ನಲಾಗುತ್ತಿದೆ.

ನೀರು ನಿಲ್ಲಿಸಿರುವ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ. ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.