ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿಯ ಎನ್. ನಂದಿಹಳ್ಳಿಯ ಮಂಜುನಾಥ್ ಅವರು ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ್ದು, ಗ್ರಾಮಸ್ಥರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಗ್ರಾಮದ ತುಂಬಾ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಊರಿನ ಯೋಧನ ಬಗ್ಗೆ ಗ್ರಾಮಸ್ಥರು ಹೆಮ್ಮೆಪಟ್ಟರು. ಎಲ್ಲರೂ ಕೂಡಿಕೊಂಡು ಸಿಹಿ ತಿನ್ನಿಸುವುದರ ಮೂಲಕ ಮಂಗಳವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ ಕೋರಿದರು.
ನಿವೃತ್ತ ಯೋಧ ಮಂಜುನಾಥ್ ಮಾತನಾಡಿ, ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ಇದೆ. ದೇಶ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ಪುಣ್ಯದ ಕೆಲಸ. ಮತ್ತಷ್ಟು ಅವಕಾಶ ಇದ್ದಿದ್ದರೆ ಇನ್ನಷ್ಟು ಕಾಲ ದೇಶ ಸೇವೆ ಮಾಡಲು ಸಿದ್ಧನಿದ್ದೆ. ದೇಶ ಸೇವೆಯ ಅವಕಾಶ ಇನ್ನಿಲ್ಲವಾಗಿರುವುದಕ್ಕೆ ಬೇಸರವಾಗುತ್ತಿದೆ ಎಂದು
ಹೇಳಿದರು.
ನಿವೃತ್ತಿ ನಂತರ ಇದೇ ಮೊದಲ ಬಾರಿಗೆ ನನ್ನ ಊರಿಗೆ ಆಗಮಿಸಿದ್ದೇನೆ. ಜನರಿಂದ ಇಂತಹ ಸ್ವಾಗತ ಕಂಡು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಪ್ರತಿ ಗ್ರಾಮದಲ್ಲಿಯೂ ಕನಿಷ್ಠ ಒಬ್ಬ ಯುವಕನಾದರೂ ಭಾರತೀಯ ಸೈನ್ಯಕ್ಕೆ ಸೇರಬೇಕೆಂಬುದು ನನ್ನ ಅಭಿಲಾಷೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.