ADVERTISEMENT

ತಿದ್ದುಪಡಿ ಕಾಯ್ದೆಗಳ ಅರಿವಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:40 IST
Last Updated 1 ಡಿಸೆಂಬರ್ 2020, 3:40 IST
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು
ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು   

ತಿಪಟೂರು: ‘ಸುಗ್ರೀವಾಜ್ಞೆ ಮೂಲಕ ಜಾರಿಯಾಗಿರುವ ಕಾಯ್ದೆಗಳ ಬಗ್ಗೆ ಕಾರ್ಯಾಗಾರದ ಮೂಲಕ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಕರ್ನಾಟಕ ರಾಜ್ಯ ರೈತ ಸಂಘದ ಮಾಡಲಿದೆ’ ಎಂದು ರೈತ ಸಂಘದ ಬಿ.ಯೋಗೀಶ್ವರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿ.4 ರಂದು ಕಾರ್ಯಾಗಾರ ನಡೆಯಲಿದ್ದು, ಎ.ಪಿ.ಎಂ.ಸಿ.ಕಾಯ್ದೆ, ಕೃಷಿ ಹಾಗೂ ಅಗತ್ಯ ವಸ್ತುಗಳ ಕಾಯ್ದೆ ಬಗ್ಗೆ ಬೆಂಗಳೂರಿನ ರಾಜ್ಯ ಕೃಷಿ ಮಾರಾಟ ಮಂಡಳಿಯ ನಿವೃತ್ತ ಜನರಲ್ ಮ್ಯಾನೇಜರ್ ಎಸ್.ಎಸ್.ಶಂಕರಮೂರ್ತಿ ಮಾಹಿತಿ ನೀಡಲಿದ್ದಾರೆ’ ಎಂದರು.

‘ಬಿತ್ತನೆಬೀಜ ಉತ್ಪಾದನೆ, ಸಂಗ್ರಹಣೆ ಹಾಗೂ ಬೀಜ ಕಾಯ್ದೆ-2019ರ ಬಗ್ಗೆ ಅಮೃತ ಭೂಮಿ ಅಂತರ ರಾಷ್ಟ್ರೀಯ ಕೃಷಿ ಅಧ್ಯಯನ ಕೇಂದ್ರದ ಚುಕ್ಕಿ ನಂಜುಂಡಸ್ವಾಮಿ ಮಾಹಿತಿ ನೀಡಲಿದ್ದಾರೆ. ಗುತ್ತಿಗೆ ಬೇಸಾಯ, ವಿದ್ಯುತ್ ಖಾಸಗೀಕರಣದ ಬಗ್ಗೆ ಕರ್ನಾಟಕ ರೈತ ಸಂಘದ ವರಿಷ್ಠರ ಕೆ.ಟಿ.ಗಂಗಾಧರ್ ಮಾಹಿತಿ ನೀಡಲಿದ್ದಾರೆ’ ಎಂದರು.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷವು ಒಂದಲ್ಲ ಒಂದು ಕೃಷಿ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ರೈತರನ್ನು ಸಜೀವವಾಗಿ ಕೊಲ್ಲುತ್ತಿದ್ದಾರೆ. ಪ್ರಪಂಚದಾದ್ಯಂತ ಕೊರೊನಾ ಸೋಂಕಿನ ಸಂಕಷ್ಟದ ನಡುವೆ ಲೋಕಸಭೆ, ವಿಧಾನಸಭೆ ಅಥವಾ ಜನರೊಂದಿಗೆ ಚರ್ಚಿಸದೆ ಸುಗ್ರೀವಾಜ್ಞೆಗಳ ಮೂಲಕ ಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ರೈತರು ಮುಂದಿನ ದಿನಗಳಲ್ಲಿ ಜೀವನ ನಡೆಸುವುದೇ ಕಷ್ಟಮಯವಾಗಲಿದೆ.
ಆದ್ದರಿಂದ ಎಲ್ಲಾ ಕಾಯ್ದೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರವನ್ನು ರೂಪಿಸಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಜಯಾನಂದಯ್ಯ ತಿಮ್ಲಾಪುರ, ನಂಜಾಮರಿ
ತಡಸೂರು, ಷಡಕ್ಷರಯ್ಯ ಬೇಲೂರನಹಳ್ಳಿ, ಸಿದ್ದಪ್ಪ, ರಾಜಣ್ಣ ಬನ್ನಿಹಳ್ಳಿ, ಬಸವರಾಜು ಉಪ್ಪಿನಹಳ್ಳಿ, ಕುಮಾರಸ್ವಾಮಿ ಕರೀಕೆರೆ, ಚೇತನ್ ಗೌಡನಕಟ್ಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.