ADVERTISEMENT

ಕೊರಟಗೆರೆ: ಮುಸುಕಿನ ಜೋಳಕ್ಕೆ ಲದ್ದಿ ಹುಳುವಿನ ಬಾಧೆ

ಕೊರಟಗೆರೆ ತಾಲ್ಲೂಕಿನಾದ್ಯಂತ 5,320 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ

ಎ.ಆರ್.ಚಿದಂಬರ
Published 15 ಜುಲೈ 2024, 7:40 IST
Last Updated 15 ಜುಲೈ 2024, 7:40 IST
ಲದ್ದಿ ಕೀಟ ಬಾಧೆಯಿಂದ ಹಾಳಾಗಿರುವ ಮುಸುಕಿನ ಜೋಳದ ಗರಿ
ಲದ್ದಿ ಕೀಟ ಬಾಧೆಯಿಂದ ಹಾಳಾಗಿರುವ ಮುಸುಕಿನ ಜೋಳದ ಗರಿ   

ಕೊರಟಗೆರೆ: ತಾಲ್ಲೂಕಿನ ಹಲವೆಡೆ ಮುಸುಕಿನ ಜೋಳದ ಪೈರಿಗೆ ಲದ್ದಿ ಹುಳದ ಬಾಧೆ ಶುರುವಾಗಿದ್ದು, ಪ್ರಾರಂಭದ ಹಂತದಲ್ಲೇ ಜೋಳದ ಬೆಳೆ ನಾಶವಾಗುತ್ತಿದೆ.

ತಾಲ್ಲೂಕಿನಾದ್ಯಂತ ಮುಸುಕಿನ ಜೋಳ, ಶೇಂಗಾ, ತೊಗರಿ, ರಾಗಿ ಬೆಳೆಗಳನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈ ವರ್ಷ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಕಾರಣ ಬಹುತೇಕ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದಾರೆ. ಹೊಳವನಹಳ್ಳಿ ಹಾಗೂ ಕೋಳಾಲ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮುಸುಕಿನ ಜೋಳ ಬಿತ್ತನೆಯಾಗಿದೆ. ತಾಲ್ಲೂಕಿನಾದ್ಯಂತ 5,320 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ.

ಬಿತ್ತನೆಯಾದ ಬೀಜ ಉತ್ತಮವಾಗಿ ಮೊಳಕೆಯೊಡೆದು 15- 20 ದಿನಕ್ಕೆ ಸುಮಾರು ಒಂದೂವರೆಯಿಂದ ಎರಡು ಅಡಿ ಎತ್ತರಕ್ಕೆ ಬೆಳೆದಿದೆ. ಆದರೆ ಈಗ ಗಿಡದ ಗರಿಗಳನ್ನು ಲದ್ದಿ ಹುಳುಗಳು ತಿನ್ನುತ್ತಿವೆ. ಉತ್ತಮವಾಗಿದ್ದ ಬೆಳೆಗೆ ಆರಂಭದಲ್ಲಿಯೇ ಕೀಟ ಬಾಧೆ ಶುರುವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಎದುರಾಗಿದೆ.

ADVERTISEMENT

ಬಿತ್ತನೆ ನಂತರ 9ರಿಂದ 15 ದಿನದ ಒಳಗೆ ಲದ್ದಿ ಹುಳುಗಳು ರೂಪಾಂತರಗೊಂಡು ಮೊದಲು ಸಸ್ಯದ ಎಲೆ(ಗರಿ)ಗಳನ್ನು ತಿಂದು ಸಂತತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ನಂತರ ಸಸ್ಯದ ಕಾಂಡಕ್ಕೆ ಲಗ್ಗೆ ಇಟ್ಟು ಒಂದೆರಡು ದಿನಗಳಲ್ಲೆ ಇಡೀ ಸಸ್ಯವನ್ನು ತಿಂದು ಹಾಕುತ್ತವೆ. ಇದು ತಾಲ್ಲೂಕಿನಲ್ಲಿ ಬಿತ್ತನೆಯಾಗಿರುವ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಕೀಟ ಆಕ್ರಮಣಗೊಂಡ ಮೂರ್ನಾಲ್ಕು ದಿನದಲ್ಲೇ ಗಿಡವನ್ನು ಸಂಪೂರ್ಣ ನಾಶ ಪಡಿಸುತ್ತಿವೆ.

ಲದ್ದಿ ಕೀಟ ಬಾಧೆಯಿಂದ ಹಾಳಾಗಿರುವ ಮುಸುಕಿನ ಜೋಳದ ಗರಿ
ಗರಿ ಸೀಳಿ ತಿನ್ನುವ ಹುಳು
ಈ ಬಾರಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿತ್ತು. ಬೆಳೆ ಆರಂಭದಲ್ಲಿ ಚೆನ್ನಾಗಿತ್ತು. ಆದರೆ ಕಳೆದ ಮೂರ್ನಾಲ್ಕು ದಿನದಲ್ಲಿ ಕೀಟ ಬಾಧೆ ಕಾಣಿಸಿಕೊಂಡಿದೆ. ಜೋಳದ ಗರಿಯನ್ನು ಸೀಳಿಕೊಂಡು ಹುಳಗಳು ತಿನ್ನುತ್ತಿವೆ. ಕೀಟ ಬಿದ್ದ ನಾಲ್ಕೈದು ದಿನದಲ್ಲಿ ಗಿಡವನ್ನು ಕೀಟಗಳು ಸಂಪೂರ್ಣ ತಿಂದು ಹಾಕುತ್ತಿವೆ. ನಾಗರಾಜು ರೈತ ರಾತ್ರೋರಾತ್ರಿ ಪೈರು ನಾಶ ಮಳೆಯಾಶ್ರಿತ ಪ್ರದೇಶದಲ್ಲಿ ನಾಲ್ಕು ಎಕರೆ ಭೂಮಿಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದೇನೆ. ಬಿತ್ತನೆಯಾಗಿ 14 ದಿನದಲ್ಲೇ ಸಣ್ಣ ಹಸಿರು ಬಣ್ಣದ ಹುಳುಗಳು ಬೆಳೆಯನ್ನು ಆವರಿಸಿ ತಿನ್ನುತ್ತಿವೆ. ರಾತ್ರೋರಾತ್ರಿ ಒಂದೆರಡು ಅಡಿ ಬೆಳೆದಿರುವ ಪೈರು ನಾಶವಾಗುತ್ತಿದೆ. ಇದು ರೈತರಲ್ಲಿ ಆತಂಕ ಉಂಟು ಮಾಡಿದೆ. ಎ.ಮಂಜುನಾಥ ರೈತ ಮಾವತ್ತೂರು
ಕೀಟನಾಶಕ ದಾಸ್ತಾನು
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕೋಳಾಲ ಹೋಬಳಿಯ ಸ್ವಲ್ಪ ಭಾಗದಲ್ಲಿ ಲದ್ದಿ ಹುಳ ಕೀಟ ಬಾಧೆ ಕಾಣಿಸಿಕೊಂಡಿದೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಸಕಾಲದಲ್ಲಿ ಕ್ರಮ ಕೈಗೊಂಡಲ್ಲಿ ಇದನ್ನು ನಿಯಂತ್ರಿಸಬಹುದು. ರೈತ ಸಂಪರ್ಕ ಕೇಂದ್ರದಲ್ಲಿ ಕೀಟನಾಶಕ ದಾಸ್ತಾನು ಇರಿಸಲಾಗಿದೆ. 15 ಲೀಟರ್ ನೀರಿಗೆ 6 ಗ್ರಾಂ ಕೀಟ ನಾಶಕ ಬೆರೆಸಿ ಅದನ್ನು ಬೆಳೆ ಮೇಲೆ ಸಿಂಪಡಿಸಬೇಕು. ಈ ಕೀಟ ಹಗಲಿನಲ್ಲಿ ಹೊರ ಬರುವುದಿಲ್ಲ. ರಾತ್ರಿ ಬೆಳೆ ಮೇಲೆ ಆಕ್ರಮಣ ಮಾಡುವ ಕಾರಣಕ್ಕೆ ಕೀಟ ನಾಶಕವನ್ನು ಸಂಜೆ 4.30 ನಂತರ ಸಿಂಪಡಿಸಿದರೆ ಕೀಟ ಸಂಪೂರ್ಣ ನಾಶವಾಗುತ್ತದೆ. ಕೀಟ ನಾಶಕ ಸಿಂಪಡಣೆ ನಂತರ ಜಾನುವಾರುಗಳು ಬೆಳೆಗಳ ಕಡೆ ಹೋಗದಂತೆ ಎಚ್ಚರ ವಹಿಸಬೇಕು. ಎಂ.ಆರ್.ರುದ್ರಪ್ಪ ಸಹಾಯಕ ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.