ವೈ.ಎನ್. ಹೊಸಕೋಟೆ (ಪಾವಗಡ ತಾಲ್ಲೂಕು): ಹೋಬಳಿಯ ಬೂದಿಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ರಾತ್ರಿ ಸ್ಫೋಟ ಸಂಭವಿಸಿದ್ದು, ಗೋಡೆಗಳು ಜಖಂಗೊಂಡಿವೆ.
ಕಚೇರಿಯ ಹಿಂಭಾಗದ ಕಿಟಕಿ ಯನ್ನು ಕಿತ್ತು ಒಳ ನುಸುಳಿರುವ ದುಷ್ಕ ರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸಭಾಂ ಗಣದ ಮೂಲೆಯಲ್ಲಿನ ಕುರ್ಚಿ ಮೇಲೆ ಸ್ಫೋಟ ನಡೆಸಿದಂತೆ ಕಂಡುಬಂದಿದ್ದು, ಕುರ್ಚಿಗಳು ಸುಟ್ಟು ಹೋಗಿವೆ.
ರಾತ್ರಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದೆ. ಗಾಬರಿಗೊಂಡ ಜನರು ಹೋಗಿ ನೋಡಿದಾಗ ಪಂಚಾಯಿತಿ ಕಚೇರಿಯಲ್ಲಿ ಬೆಂಕಿ ಉರಿಯುತ್ತಿರುವುದು ಕಾಣಿಸಿದೆ. ಸ್ಫೋಟಕ್ಕೆ ಸ್ಪಷ್ಟ ಆಧಾರ ದೊರೆತಿಲ್ಲ. ಆದರೆ, ಹಿಂದೆ ಈ ಪ್ರದೇಶ ನಕ್ಸಲರ ಅಡಗುತಾಣವಾಗಿದ್ದು, ಮತ್ತೆ ಅವರ ಚಟುವಟಿಕೆಗಳು ಗರಿಗೆದರಿವೆಯೇ ಎಂಬ ಸಂಶಯ ಜನರಿಗೆ ಕಾಡುತ್ತಿದೆ.
‘ಹಲವು ತಿಂಗಳುಗಳಿಂದ ಗ್ರಾಮ ಪಂಚಾಯಿತಿಯಲ್ಲಿ ನಿವೇಶನದ ಖಾತೆ ವಿಚಾರವಾಗಿ ಅಧಿಕಾರಿಗಳು ಮತ್ತು ಬಲಾಢ್ಯರ ನಡುವೆ ಸಂಘರ್ಷ ನಡೆಯುತ್ತಿದೆ. ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಕಚೇರಿವರೆಗೆ ದೂರುಗಳು ಸಲ್ಲಿಕೆಯಾಗಿವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಕಚೇರಿಯಲ್ಲಿನ ದಾಖಲೆ ನಾಶ ಮಾಡಲು ಈ ರೀತಿ ಕೃತ್ಯ ನಡೆದಿರಬಹುದು’ ಎಂದು ಸ್ಥಳೀಯರಾದ ಗಂಗಣ್ಣ ಹೇಳಿದರು.
ಯಾವುದೇ ಆಧಾರವಿಲ್ಲ
ಗ್ರಾಮ ಪಂಚಾಯಿತಿಯಲ್ಲಿ ಸ್ಫೋಟ ನಡೆದಿರುವುದು ಸತ್ಯ. ಆದರೆ ಯಾವ ರೀತಿ ನಡೆಸಿದ್ದಾರೆ? ಏಕೆ ನಡೆಸಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರ ದೊರೆತಿಲ್ಲ. ಸ್ಫೋಟ ನಡೆದ ಸ್ಥಳದಲ್ಲಿ ಜಿಲೆಟಿನ್ ಕಡ್ಡಿ, ಪೌಡರ್ ಇನ್ನಿತರೆ ಯಾವುದೇ ಸ್ಫೋಟಕ ವಸ್ತುಗಳ ಚೂರುಗಳೂ ಕಂಡುಬಂದಿಲ್ಲ. ಕೇವಲ ಮೂರು-ನಾಲ್ಕು ಕುರ್ಚಿಗಳು ಸುಟ್ಟಿವೆ. ಗೋಡೆಗಳು ಒಡೆದಿವೆ. ತಜ್ಞರು ಬರಲಿದ್ದು, ಪರಿಶೀಲನೆ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ.
ಕಾಂತರೆಡ್ಡಿ, ಸಿಪಿಐ,ಪಾವಗಡ ಗ್ರಾಮಾಂತರ ವೃತ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.