ಉಡುಪಿ: ‘ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ’ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು. ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಉಡುಪಿ ಹೊರ ವಲಯದ ಸಂತೆಕಟ್ಟೆ ಬಳಿ ಪ್ರಗತಿಪರ ಸಂಘಟನೆಗಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದವು.
ಅವರನ್ನು ಉದ್ದೇಶಿಸಿ ಮಾತನಾಡಿದ ರೈ, ‘ಅಭಿಪ್ರಾಯವನ್ನು ಖಂಡಿಸಬಹುದು, ಆದರೆ ಕ್ರೌರ್ಯ ಒಳ್ಳೆಯದಲ್ಲ. ಇನ್ನೊಬ್ಬರ ಬಾಯಿ ಮುಚ್ಚಿಸುವ ಕೆಲಸ ಮಾಡಬಾರದು. ಯಾವ ಮನುಷ್ಯ ಪ್ರಕೃತಿ ಹಾಗೂ ಜನ ವಿರೋಧಿ ಕೆಲಸ ಮಾಡುವುದಿಲ್ಲವೋ, ಪ್ರಾಮಾಣಿಕತೆಯಿಂದ ಇರುತ್ತಾನೋ ಅಂತಹ ವ್ಯಕ್ತಿ ಯಾರಿಗೂ ಅಂಜದೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಿಕೊಡಬೇಕು. ನಾವು ನೆಮ್ಮದಿಯಿಂದ ಇರಬೇಕು’ ಎಂದರು.
ಸಂತೆಕಟ್ಟೆ ಜಂಕ್ಷನ್ಗೆ ರೈ ಅವರ ಕಾರು ಬಂದೊಡನೆ ಪಟಾಕಿ ಸಿಡಿಸಿ, ತಮಟೆ ಬಾರಿಸಿದರು. ಘೋಷಣೆಗಳನ್ನು ಕೂಗಿ ಹಾರ ಹಾಕಿ, ಹೂ ನೀಡಿ ಅವರನ್ನು ಸ್ವಾಗತಿಸಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಸಿಐಟಿಯು, ಡಿವೈಎಫ್ಐ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ವಿಮಾ ನೌಕರರ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಕ್ರೈಸ್ತ ವೇದಿಕೆ ಸಂಘಟನೆಗಳ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.