ADVERTISEMENT

ಕಡಲ್ಕೊರೆತ ತೀವ್ರ: ಶಾಶ್ವತ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 10:23 IST
Last Updated 1 ಜುಲೈ 2017, 10:23 IST
ಶಿರ್ವ ಸಮೀಪ ಕಡಲು ಕೊರೆತದಿಂದ ಹಾನಿಗೊಂಡಿರುವ ರಸ್ತೆ
ಶಿರ್ವ ಸಮೀಪ ಕಡಲು ಕೊರೆತದಿಂದ ಹಾನಿಗೊಂಡಿರುವ ರಸ್ತೆ   

ಶಿರ್ವ: ಇಲ್ಲಿನ ಪಡುಕೆರೆ, ಮಟ್ಟು, ಕಡೆಕಾರ್, ಉದ್ಯಾವರ ಪಡುಕೆರೆ, ಕಾಪು,  ಎರ್ಮಾಳ್,  ಪಡುಬಿದ್ರಿ  ಮುಂತಾದ ತೀರ ಪ್ರದೇಶದಲ್ಲಿ ಕಡಲು ಉಗ್ರರೂಪ ತಾಳಿದ್ದು, ಕರಗುತ್ತಿರುವ ಜಮೀನು, ಮರಗಳು, ಕುಸಿತದ ಭೀತಿಯಲ್ಲಿರುವ ಮನೆ ಇತ್ಯಾದಿ ಜನರ ನಿದ್ದೆಗೆಡಿಸಿದೆ.

ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿಯೇ ದಿನ ದೂಡುವಂತಾಗಿದೆ. ಸಮುದ್ರದ ನೀರು  ತಡೆಗೋಡೆಗಳನ್ನು ಮುರಿದು ಮೀನುಗಾರಿಕಾ ರಸ್ತೆಗಳನ್ನೂ ಹಾನಿಗೊಳಿಸಿದೆ.   ಕಡ ಲ್ಕೊರೆತ ವನ್ನು ತಡೆಯಲು ಹಾಕಿದ ಕಲ್ಲುಗಳು , ತೆಂಗಿನ ಮರಗಳು ಸಮುದ್ರ ಪಾಲಾಗುತ್ತಿದ್ದು, ಮನೆಗಳೂ ಕುಸಿಯುವ ಭೀತಿಯಲ್ಲಿವೆ.

‘ಇಲ್ಲಿ ಹಲವು ಕಡೆ ಕಡಲು ಉಗ್ರರೂಪ ತಳೆದಿದ್ದು, ಕರಾವಳಿ ತೀರದ ಜನರು ಆತಂಕದಲ್ಲಿ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮಳೆಗಾಲದಲ್ಲಿ ತಾತ್ಕಾಲಿಕ ತಡೆಗೋಡೆಯನ್ನು  ಸರ್ಕಾರ ನಿರ್ಮಿಸುತ್ತಿದ್ದರೂ ಇದರಿಂದ  ಪ್ರಯೋಜನ ಆಗಿಲ್ಲ’ ಎಂಬುದು ಸಮುದ್ರ ತೀರ ನಿವಾಸಿಗಳ ಆರೋಪವಾಗಿದೆ.

ADVERTISEMENT

ಈ ತಾತ್ಕಾಲಿಕ ತಡೆಗೋಡೆಗೆ ಹಾಕಿರುವ ಲೋಡುಗಟ್ಟಳೆ ಕಲ್ಲ್ಲುಗಳು ಪ್ರತಿ ವರ್ಷ ಮಳೆಗಾಲದಲ್ಲಿ ಕಡಲ ಒಡಲು ಸೇರುತ್ತಿವೆ ಎಂಬುದು ಅವರ ಹೇಳಿಕೆಯಾಗಿದೆ.
‘ಮಳೆ ಜೋರಾಗಿದ್ದು, ಕಡಲು ಇನ್ನಷ್ಟು ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇದೆ.

ಕಡಲ್ಕೊರೆತ ಸಮಸ್ಯೆಗೆ ಶಾಶ್ವತವಾದ  ಪರಿಹಾರ ಕಲ್ಪಿಸಬೇಕಾದುದು  ಅನಿವಾರ್ಯವೆನಿಸಿದೆ.  ಜನಪ್ರತಿನಿಧಿಗಳು ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ , ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ ಅನುದಾನ  ಬಿಡುಗಡೆ ಮಾಡುತ್ತಿದ್ದಾರೆ. ಆದರೆ ಪ್ರತಿಫಲ ಶೂನ್ಯ’ ಎಂಬುದು ಸ್ಥಳೀಯ ನಿವಾಸಿಗಳ ಅಳಲಾಗಿದೆ.

‘ಕಡಲ ಅಬ್ಬರಕ್ಕೆ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳು ಸಮುದ್ರವನ್ನು ಸೇರುತ್ತಿವೆ. ಅದರ ಬದಲು ಈ ಅನುದಾನವನ್ನು ಶಾಶ್ವತ ಕಾಮಗಾರಿಗೆ ಬಳಸಿದರೆ ತೀರ ಪ್ರದೇಶದ ಜನರಿಗೆ ಬಹಳ ಉಪಯೋಗವಾಗುತ್ತದೆ’ ಎಂಬುದು ನಿವಾಸಿಗಳ ಅಭಿಪ್ರಾಯ.

‘ಅಧಿಕಾರಿಗಳು ಕಡಲ್ಕೊರೆತಕ್ಕೆ ಗುರಿಯಾಗುತ್ತಿರುವ ಪ್ರದೇಶಗಳನ್ನು ಗುರುತಿಸಿ, ಈ ಭಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿದಲ್ಲಿ  ಮಾತ್ರ  ಇಲ್ಲಿನ ಜನರು ನೆಮ್ಮದಿಯ ಜೀವನ ನಡೆಸಬಹುದಾಗಿದೆ.  ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು’ ಎಂಬುದು ಬೇಡಿಕೆಯಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು  ಇದರ ಬಗ್ಗೆ ಆಸಕ್ತಿ ತೋರಬೇಕಾಗಿದೆ.

ಕೊರೆತ ತಡೆಗೆ ಸ್ಥಳೀಯರ ಪ್ರಯತ್ನ
ಗಾಳಿಯ ವೇಗ ಮುಂದುವರಿ ದಲ್ಲಿ ಅಲೆಯ ಅಬ್ಬರಕ್ಕೆ  ರಸ್ತೆ ಕುಸಿದು ಬೀಳುವ  ಸಾಧ್ಯತೆ ಇದೆ ಎಂದು  ಸ್ಥಳೀಯರು ತಿಳಿಸಿದ್ದಾರೆ. ಕೊರೆತ ತಡೆಗೆ ಹಾಕಿದ ಕಲ್ಲುಗಳೆಲ್ಲಾ  ಸಮುದ್ರ ಪಾಲಾಗುತ್ತಿದ್ದು, ಕೊರೆತ ಉಂಟಾದ ಜಾಗದಲ್ಲಿ ಕಲ್ಲುಗಳ ಮರು ಜೋಡಣೆ ನಡೆಯುತ್ತಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ.  ಸ್ಥಳೀಯ ಯುವಕರು ತಡೆಗೋಡೆಯಂತೆ ಬಂಡೆ ಕಲ್ಲುಗಳನ್ನು ಹಾಕಿ ತಾತ್ಕಾಲಿಕ ಪರಿಹಾರ ಕಲ್ಪಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.