ADVERTISEMENT

ನಮ್ಮಗ್ರಾಮ ನಮ್ಮರಸ್ತೆ ಯೋಜನೆಗೆ 6 ಕೋಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:20 IST
Last Updated 24 ಫೆಬ್ರುವರಿ 2011, 9:20 IST

ಬ್ರಹ್ಮಾವರ: ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯ ‘ನಮ್ಮ ಗ್ರಾಮ ನಮ್ಮ ರಸ್ತೆ’  ಯೋಜನೆಯಡಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 9 ಕಾಮಗಾರಿ ಮಂಜೂರಾಗಿದ್ದು, ಒಟ್ಟು 20.61 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ರೂ. 6.45 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಬ್ರಹ್ಮಾವರ ಕೊಳಲಗಿರಿಯಲ್ಲಿ ಸುಮಾರು 3 ಕಿ.ಮೀ ಉದ್ದದ ಉಪ್ಪೂರು ಮತ್ತು ಕುಂಜಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾತಬೆಟ್ಟು- ಬೆಳ್ಮಾರು ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರೂ. ಒಂದು ಕೋಟಿ ಅನುದಾನದಲ್ಲಿ ಈ ರಸ್ತೆ ನಿರ್ಮಿಸಲಾಗುತ್ತಿದೆ. ಇದರ ಜತೆ ಉಳಿದ ಎಂಟು ಕಾಮಗಾರಿಗಳಿಗೂ ಮಂಗಳವಾರ ಶಂಕುಸ್ಥಾಪನೆ ನಡೆದಿದ್ದು ವಿಶೇಷ.

ಕುಂಜಾಲು ಗ್ರಾಮ ಪಂಚಾಯಿತಿಯ ನೀಲಾವರ ದೇವಸ್ಥಾನದ ಸಮೀಪ 2.49 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ ರೂ. 53.30 ಲಕ್ಷ, ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡಾಲುವಿನಲ್ಲಿ 2.19 ಕಿ.ಮೀ ಉದ್ದದ ರಸ್ತೆಗೆ ರೂ. 65.19 ಲಕ್ಷ, ನಾಲ್ಕೂರು ಗ್ರಾಮ ಪಂಚಾಯಿತಿಯ ಅರ್ಬಿಯಲ್ಲಿ 2.19 ಕಿ.ಮೀ ಉದ್ದದ ರಸ್ತೆಗೆ ರೂ. 87.35 ಲಕ್ಷ, ಚೇರ್ಕಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2.70 ಕಿ.ಮೀ ಉದ್ದದ ರಸ್ತೆಗೆ ರೂ. 80 09 ಲಕ್ಷದ ಕಾಮಗಾರಿಗಳನ್ನು ಇನ್ನೊಂದು ವರ್ಷದೊಳಗೆ ಪೂರೈಸಲಾಗುವುದು ಎಂದು ಅವರು ತಿಳಿಸಿದರು.

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಈ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟವನ್ನು ಉಳಿಸಿಕೊಳ್ಳುವಂತೆ  ಗುತ್ತಿಗೆದಾರರರಿಗೆ ಸೂಚಿಸಿದರು. ಕಳೆದ ಎರಡು ವರ್ಷಗಳ ಹಿಂದೆ ಮುರಿದುಹೋದ ಆರೂರು ಬೆಳ್ಮಾರಿಗೆ ಸಂಪರ್ಕ ಕಲ್ಪಿಸುವ ಕಾಲು ಸೇತುವೆಯ ದುರಸ್ತಿಗೆ 18 ಲಕ್ಷ ಮಂಜೂರಾಗಿದ್ದು, ಕೂಡಲೇ ಕಾಮಗಾರಿ  ಆರಂಭಿಸಲಾಗುವುದು. ಅದೇ ರೀತಿ ಉಗ್ಗೇಲ್‌ಬೆಟ್ಟಿನಲ್ಲಿ ಕಿಂಡಿ ಅಣೆಕಟ್ಟಿನ ರಚನೆಗೂ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ರಘುಪತಿ ಭಟ್ ತಿಳಿಸಿದರು.

ಉಪ್ಪೂರು ಗ್ರಾ.ಪಂ. ಅಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ಕುಂಜಾಲು ಗ್ರಾಪಂ ಅಧ್ಯಕ್ಷ ರಘುರಾಮ ಶೆಟ್ಟಿ, ಉಪಾಧ್ಯಕ್ಷ ರಾಜು ಕುಲಾಲ, ಹಾವಂಜೆ ಗ್ರಾ.ಪಂ. ಅಧ್ಯಕ್ಷ ಉದಯ ಕೋಟ್ಯಾನ್, ಗ್ರಾಮಸಡಕ್ ಯೋಜನೆಯ ಚಂದ್ರಶೇಖರ್, ಗುತ್ತಿಗೆದಾರರಾದ ಉದಯ ಶೆಟ್ಟಿ ಮುನಿಯಾಲು, ಬೈಕಾಡಿ ಜೀವನ್ ಶೆಟ್ಟಿ, ಆರೂರು ದೇವಳದ ಆಡಳಿತ ಮೊಕ್ತೇಸರ ಡಾ.ಎಂ.ಪಿ ರಾಘವೇಂದ್ರ ರಾವ್, ಕುಂಜಾಲು ಗ್ರಾ.ಪಂ. ಸದಸ್ಯೆ ನಳಿನಿ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.