ADVERTISEMENT

ಪೌರಾಡಳಿತಕ್ಕೆ ನಿರೀಕ್ಷೆಗೂ ಮೀರಿ ಅನುದಾನ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 8:55 IST
Last Updated 10 ಮಾರ್ಚ್ 2018, 8:55 IST
ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರಿನಲ್ಲಿ ನವೀಕೃತಗೊಂಡ ಹಿಂದೂ ಸ್ಮಶಾನವನ್ನು ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸಿ, ವೀಕ್ಷಿಸಿದರು.
ಕಾಪು ಪುರಸಭೆ ವ್ಯಾಪ್ತಿಯ ಮಲ್ಲಾರಿನಲ್ಲಿ ನವೀಕೃತಗೊಂಡ ಹಿಂದೂ ಸ್ಮಶಾನವನ್ನು ಸಚಿವ ಈಶ್ವರ ಬಿ.ಖಂಡ್ರೆ ಉದ್ಘಾಟಿಸಿ, ವೀಕ್ಷಿಸಿದರು.   

ಪಡುಬಿದ್ರಿ: ರಾಜ್ಯ ಸರ್ಕಾರ ಪೌರಾಡಳಿತಕ್ಕೆ ನಿರೀಕ್ಷೆಗೂ ಮೀರಿ ಅನುದಾನ ನೀಡಿದ್ದು, ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕಾದ ಹೊಣೆ ಪೌರಾಡಳಿತ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿದೆ ಎಂದು ಪೌರಾಡಳಿತ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಶುಕ್ರವಾರ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನದಿಂದ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ₹3 ಸಾವಿರ ಕೋಟಿ ಅನುದಾನವನ್ನು ನಗರೋತ್ಥಾನದ ಮೂಲಕ ಪೌರಾಡಳಿತಕ್ಕೆ ನೀಡಿದೆ. ಅಮೃತ್ ಯೋಜನೆ ಅಡಿ ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ₹4,800 ಕೋಟಿ ಅನುದಾನ ನೀಡಿದೆ. ಒಳಚರಂಡಿ, ಶುದ್ಧಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ಒದಗಿಸಿದೆ. ಯೋಜನಾಬದ್ಧ ನಗರಗಳು ಬೆಳೆಯಬೇಕಾದರೆ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗಬೇಕು. ಸ್ವಚ್ಛ ಭಾರತ ಯೋಜನೆ ಅಡಿ ಬಯಲು ಬಹಿರ್ದೆಸೆ ಮುಕ್ತ ಪಟ್ಟಣವಾಗಿಸಲು ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.

ADVERTISEMENT

ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಕಾಪು ಪಟ್ಟಣ ಮತ್ತು ಗ್ರಾಮಗಳು ವೇಗವಾಗಿ ಅಭಿವೃದ್ಧಿ ಹೊಂದಲು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.

ಉದ್ಘಾಟನೆ, ಗುದ್ದಲಿಪೂಜೆ: ಕಾಪು ಪುರಸಭಾ ವ್ಯಾಪ್ತಿಯ ₹130 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ₹8.50 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆಯನ್ನು ಸಚಿವರು ನೆರವೇರಿಸಿದರು. ಡಾ. ಪ್ರಭಾಕರ ಶೆಟ್ಟಿ ಮನೆಯಿಂದ ಫಕೀರ್ಣಕಟ್ಟೆ ರಸ್ತೆ ಅಭಿವೃದ್ಧಿ, ಮಲ್ಲಾರು ಕೋಟೆ ರಸ್ತೆ ಅಭಿವೃದ್ಧಿ, ಫಕೀರ್ಣಕಟ್ಟೆ ಸ್ಮಶಾನ ಉದ್ಘಾಟನೆ, ಕಾಪು ಮೀನು ಮಾರುಕಟ್ಟೆ ಅಭಿವೃದ್ಧಿಗೆ ಶಿಲಾನ್ಯಾಸ, ಪಡು ಗ್ರಾಮದ ಮಮ್ಮುಕೆರೆ ಅಭಿವೃದ್ಧಿ ಉದ್ಘಾಟನೆ, ಭಟ್ರತೋಟ ಸೇತುವೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದರು.

ಇದೇ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯ ಜನತೆಗೆ ಹಕ್ಕುಪತ್ರಗಳನ್ನು ಹಾಗೂ ಕ್ರೀಡಾ ಇಲಾಖೆಯಿಂದ ವಿವಿಧ ಸಂಘ ಸಂಸ್ಥೆಗಳಿಗೆ ಕ್ರೀಡಾ ಕಿಟ್‌ಗಳನ್ನು ವಿತರಿಸಲಾಯಿತು.

ಶಾಸಕ ವಿನಯಕುಮಾರ್ ಸೊರಕೆ, ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ವಿರೋಧಪಕ್ಷದ ನಾಯಕ ಅರುಣ್ ಶೆಟ್ಟಿ, ಮುಖ್ಯಾಧಿಕಾರಿ ರಾಯಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ ಇದ್ದರು.

ಅಭಿವೃದ್ಧಿಗೆ ಮೆಚ್ಚುಗೆ

ಕಾಪು ಪುರಸಭಾ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳು ರಾಜ್ಯಕ್ಕೆ ಮಾದರಿ. ನನ್ನ ಕ್ಷೇತ್ರದಲ್ಲೂ ಇದೇ ಮಾದರಿ ಅನುಸರಿಸಿ ಅಭಿವೃದ್ಧಿ ಮಾಡುವುದಾಗಿ ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.

ಸ್ವಚ್ಛತೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾಪು ಪುರಸಭೆ ಪ್ರಥಮ ಸ್ಥಾನಕ್ಕೆ ಬರಲು ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಒದಗಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.