ಸಿದ್ದಾಪುರ: `ಬಡ ಕುಟುಂಬದಿಂದ ಬಂದ ನನಗೆ ಬಡವರ ಸಮಸ್ಯೆಗಳು ಚೆನ್ನಾಗಿ ಗೊತ್ತು. ಬಡತನ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ~ ಎಂದು ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ವಿ.ಸುನಿಲ್ಕುಮಾರ್ ಹೇಳಿದರು.
ಹೊನಕ್ಕಲ್ಲು ಮೂಕಾಂಬಿಕಾ ಕಲ್ಯಾಣಧಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳ್ವೆ ಮತ್ತು ಮಡಾಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
`ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕುಂದಾಪುರ ಕ್ಷೇತ್ರದ ಶಾಸಕರಾದ ಹಾಲಾಡಿ ಶ್ರಿನಿವಾಸ ಶೆಟ್ಟಿ ಅವರ ಆಶೀರ್ವಾದ ಕಾರಣ. ಕುಂದಾಪುರ ಜನತೆ ನನ್ನನ್ನು ಆಶೀರ್ವದಿಸಬೇಕು~ ಎಂದರು.
ಕುಂದಾಪುರ ಶಾಸಕ ಹಾಲಾಡಿ ಶ್ರಿನಿವಾಸ ಶೆಟ್ಟಿ ಮಾತನಾಡಿ, `ರಾಜ್ಯ ಸರ್ಕಾರದ ಉತ್ತಮ ಕಾರ್ಯಗಳಿಂದ ಜನ ಬಿಜೆಪಿ ಪರ ಇದ್ದಾರೆ. ಸರ್ವ ಶಿಕ್ಷಣಾ ಅಭಿಯಾನ ವೃದ್ದಾಪ್ಯ, ವೇತನ ಸಂಧ್ಯಾ ಸುರಕ್ಷಾ ಅಕ್ಷರ ದಾಸೋಹ, ಗ್ರಾಮಸಡಕ್ ಯೋಜನೆಗಳ ಮೂಲಕ ರಸ್ತೆ ಅಭಿವೃದ್ಧಿ, ಅಂತ್ಯೋದಯ, ಉಚಿತ ವಿದ್ಯುತ್ ಅಂಗವಿಕಲ ವೇತನ, ವಿಧವಾ ವೇತನ ಸುವರ್ಣಭೂಮಿ ಯೋಜನೆ, ರೈತರಿಗೆ, ನೇಕಾರರಿಗೆ, ಮೀನುಗಾರರಿಗೆ, ರೈತರಿಗೆ ಶೇ 1ರಷ್ಟು ಬಡ್ಡಿದರದಲ್ಲಿ ಸಾಲ ಮುಂತಾದುವುಗಳನ್ನು ಬಿಜೆಪಿ ಸರ್ಕಾರ ನೀಡಿದೆ~ ಎಂದರು.
3ನೇ ಹಣಕಾಸು ಆಯೋಗದ ವರದಿ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷ ಎ.ಜಿ.ಕೊಡ್ಗಿ ಮಾತನಾಡಿ, `ಬಿ.ಎಸ್.ಯಡಿಯೂರಪ್ಪ ವಿರೋಧಿಗಳ ಕುತಂತ್ರದಿಂದ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಯಿತು. ಈಗ ಅವರು ಆರೋಪ ಮುಕ್ತರಾಗಿದ್ದಾರೆ. ಈಗ ನಿಜ ಸ್ಥಿತಿ ಜನತೆಗೆ ತಿಳಿದಿದೆ~ ಎಂದರು.
ಶಾಸಕ ಕೆ.ಲಕ್ಷ್ಮಿನಾರಾಯಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ಮುಖಂಡರಾದ ಯಶಪಾಲ್ ಸುವರ್ಣ, ಕಿಶೋರ್ ಕುಮಾರ್, ಮಾಣಿ ಗೋಪಾಲ, ರಾಜೇಶ್ ಕಾವೇರಿ, ಕಿರಣ್ ಕೊಡ್ಗಿ, ಬೆಳ್ವೆ ವಸಂತಕುಮಾರ ಶೆಟ್ಟಿ, ದೀಪಿಕಾ ಎಸ್.ಶೆಟ್ಟಿ, ಪ್ರಭಾಕರ ನಾಯ್ಕ, ರತಿ ಶೆಡ್ತಿ, ಬಾಲಕೃಷ್ಣ ಶೆಟ್ಟಿ, ಉದಯಕುಮಾರ ಪೂಜಾರಿ, ಸುರ್ಗೋಳಿ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಮತ್ತಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.