ಕಾರ್ಕಳ: ಕತ್ತಲೆಯನ್ನು ದೂರ ಮಾಡಿ ಬೆಳಕು ನೀಡುವುದೇ ದೀಪಾವಳಿಯ ಸಂದೇಶ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಇಲ್ಲಿ ತಿಳಿಸಿದರು.
ತಾಲ್ಲೂಕಿನ ಬೆಳ್ಮಣ್ ಸೇಂಟ್ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ `ದೀಪಾವಳಿ ಸಂಭ್ರಮ~ ಸಮಾರಂಭದಲ್ಲಿ ಅವರು ಮಾತನಾಡಿದರು.
ತಂದೆ- ತಾಯಿ, ಗುರುಹಿರಿಯರನ್ನು ಗೌರವಿಸುವುದು, ಧರ್ಮವನ್ನು ಪರಿಪಾಲಿಸಿ ಸಮಾಜಕ್ಕೆ ಒಳಿತನ್ನು ನೀಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಎಲ್ಲಾ ಮತ ಧರ್ಮದವರಿಗೂ ಬೆಳಕು ಒಂದೇ. ದೇವರು ಒಬ್ಬನೇ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಸೆವ್ರಿನ್ ಮೆಂಡೋನ್ಸಾ ಅವರಿಗೆ `ದೀಪಾವಳಿ ಗೌರವ~ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ಸಾಮೂಹಿಕ ಪ್ರಾರ್ಥನೆ, ಲಿಂಗಾಷ್ಠಕ, ಭಗವದ್ಗೀತಾ ಪಠಣ, ಸಾಮೂಹಿಕ ದೀಪ ಪ್ರಜ್ವಲನ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿ ರೋಟರಿ ಜಿಲ್ಲಾ ನಿಕಟಪೂರ್ವ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಗ್ರೆಗೊರಿ ಮಿನೇಜಸ್, ಬೆಳ್ಮಣ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಿಕಾ ರಾವ್, ಗ್ರಾಮ ಪಂಚಾಯಿತಿ ಸದಸ್ಯೆ ಗೀತಾ ಪ್ರಭು, ಕಾನ್ವೆಂಟ್ನ ಮುಖ್ಯಸ್ತೆ ಸಿಸ್ಟರ್ ಉಷಾ ಸ್ಟೆಲ್ಲಾ, ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕಿ ಜೆನೆಟ್ ಡಿಸೋಜಾ ದೀಪಾವಳಿಯ ಶುಭಾಶಯ ಹಾರೈಸಿದರು.
ಶಾಲಾ ಸಂಚಾಲಕ ಫಾದರ್ ಲಾರೆನ್ಸ್ ಬಿ. ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಕು ಅಂದರೆ ದೇವರು. ಅನ್ಯೋನ್ಯತೆ, ಪ್ರೀತಿ ಸೌಹಾರ್ದತೆ, ಸಂಸ್ಕಾರ ಕಲಿಯಲು ಹಬ್ಬಗಳ ಆಚರಣೆ ನಿರಂತರವಾಗಿ ನಡೆಯಬೇಕು ಎಂದರು.
ಸಮಾರಂಭದಲ್ಲಿ ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ, ನಂದಳಿಕೆ ಕ್ಲಸ್ಟರ್ನ ಪಾಂಡುರಂಗ ಶೆಟ್ಟಿ, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಕೆ.ಲಕ್ಷ್ಮೀಕಾಂತ್ ಭಟ್, ಅನುದಾನಿತ ಶಾಲಾ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಕೆ.ರಾವ್ ನಂದಳಿಕೆ, ಸಿಸ್ಟರ್ ಜೆಸಿಂತಾ ಮತ್ತಿತರರು ಇದ್ದರು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೊನಿಕಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಕಾರ್ಯಕ್ರಮ ಸಂಯೊಜಿಸಿದ್ದರು. ಶಿಕ್ಷಕ ವಿನ್ಸೆಂಟ್ ಪಿಂಟೊ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ, ಪಟಾಕಿ ಬಿರುಸುಬಾಣ ಪ್ರದರ್ಶನಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.