ಮರವಂತೆ (ಬೈಂದೂರು) :ಹಿಂದಿನ ಚುನಾವಣೆಯ ವೇಳೆ ಬಿಜೆಪಿ ಪರಿಶುದ್ಧ ಆಡಳಿತ ನಡೆಸುವ, ನಿರಂತರ ಗುಣಮಟ್ಟದ ವಿದ್ಯುತ್, ನಿರುದ್ಯೋಗ ಭತ್ತೆ, ಬಡಜನರಿಗೆ ನಿವೇಶನ ನೀಡುವ, ಸಾಲ ಮನ್ನಾ ಮಾಡುವ ಭರವಸೆ ನೀಡಿತ್ತು. ಅದನ್ನು ನಂಬಿ ಮತದಾರರು ಅದಕ್ಕೆ ಅಧಿಕಾರ ನೀಡಿದರು. ಆದರೆ ಅದು ಈ ಯಾವ ಭರವಸೆಯನ್ನೂ ಈಡೇರಿಸಲಿಲ್ಲ ಎಂದು ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಕೇಂದ್ರದ ಯೋಜನೆಗಳನ್ನು ತನ್ನದೆಂದು ಪ್ರಚಾರ ಮಾಡಿಕೊಂಡಿತು. ಭ್ರಷ್ಟಾಚಾರದಲ್ಲಿ ಮುಳುಗಿತು. ರಾಜ್ಯಕ್ಕೆ ಕಳಂಕ ತಂದಿತು.
ಆಗ ಅದು ಕೇಳಿದ್ದು ಒಂದು ಅವಕಾಶ. ಅದನ್ನು ನೀಡಿದ ಜನರು ಈಗ ಪರಿತಪಿಸುತ್ತಿದ್ದಾರೆ. ಬಿಜೆಪಿ ಮರು ಅವಕಾಶ ಕೇಳುವ ಅರ್ಹತೆಯನ್ನೇ ಕಳೆದುಕೊಂಡಿದೆ. ಆದುದರಿಂದ ರಾಜ್ಯಕ್ಕೆ ಸದೃಢ, ಪ್ರಗತಿಪರ ಮತ್ತು ಪರಿಶುದ್ಧ ಆಡಳಿತ ನೀಡಲು ಬದ್ಧವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರ ಮನ ಒಲಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಮಾತನಾಡಿದರು. ಎಸ್.ರಾಜು ಪೂಜಾರಿ ಸ್ವಾಗತಿಸಿದರು. ಎಂ. ವಿನಾಯಕ ರಾವ್ ವಂದಿಸಿದರು. ಕಾಂಗ್ರೆಸ್ ಮುಖಂಡ ಮಾಣಿ ಗೋಪಾಲ, ಬೈಂದೂರು, ವಂಡ್ಸೆ ಬ್ಲಾಕ್ ಅಧ್ಯಕ್ಷ ಕೆ. ರಮೇಶ ಗಾಣಿಗ, ಎಸ್. ಸಂಜೀವ ಶೆಟ್ಟಿ, ಮುಖಂಡರಾದ ಬಿ. ರಘುರಾಮ ಶೆಟ್ಟಿ, ಎಸ್. ವಾಸುದೇವ ಯಡಿಯಾಳ, ಎಸ್. ಮದನ್ಕುಮಾರ್, ಮಂಜುನಾಥ ಖಾರ್ವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗುಣಾ ಕೆ.ಎ, ಪುಟ್ಟಯ್ಯ ಬಿಲ್ಲವ ಇದ್ದರು. ಬಿಜೆಪಿಯ ಹಲವು ಕಾರ್ಯಕರ್ತರು ಕಾಂಗ್ರೆಸ್ ಸೇರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.