ಉಡುಪಿ: ಭೂಪರಿವರ್ತನೆ, ಭೂ ನೋಂದಣಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಜಿಲ್ಲಾ ಕಂದಾಯ ಇಲಾಖಾ ಸಮಸ್ಯೆಗಳ ಪರಿಹಾರ ಸಮಿತಿ ಸದಸ್ಯರು ಉಡುಪಿಯ ಉಪನೊಂದಣಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ. ಭುಜಂಗಶೆಟ್ಟಿ, ‘ಜಿಲ್ಲೆಯಲ್ಲಿ ಭೂಪರಿವರ್ತನೆಗೆ ಸಂಬಂಧಿಸಿದ ನಮೂನೆ 9 ಮತ್ತು 11ನ್ನು ಗ್ರಾಮಪಂಚಾಯಿತಿಗಳು ನೀಡಬೇಕು, ಅದಕ್ಕೆ ನಗರಾಭಿವೃದ್ಧಿ ಇಲಾಖೆಯ ನಿರಾಪೇಕ್ಷಣ ಪ್ರಮಾಣ ಪತ್ರ(ಎನ್ಓಸಿ) ಪಡೆಯುವುದನ್ನು ಕೈಬಿಡಬೇಕು.
ನಗರಾಭಿವೃದ್ಧಿ ಇಲಾಖೆಯಿಂದ ಹೊರಗಿರುವ ಗ್ರಾಮಗಳಿಗೆ ಭೂಪರಿವರ್ತನೆ ಮಾರಾಟ ಮತ್ತು ಖರೀದಿಗೆ ಗ್ರಾಮ ಪಂಚಾಯಿತಿಗೆ ಮಾತ್ರ ದೃಢಪತ್ರ ನೀಡಬೇಕು. ಬಡಾವಣೆ ಮಾಡುವಾಗ ಒಂದು ಎಕರೆಯವರೆಗೆ ಯಾವುದೇ ಸ್ಥಳ ಕಾಯ್ದಿರಿಸುವಿಕೆಗೆ ರಿಯಾಯಿತಿ ನೀಡಬೇಕು, ಏಳು ಮೀಟರ್ ಅಗಲದ ರಸ್ತೆಯನ್ನು ಕಡ್ಡಾಯಗೊಳಿಸಬೇಕು ಹಾಗೂ 50 ಸೆಂಟ್ಸ್ ಒಳಗಿನ ಸ್ಥಳಕ್ಕೆ ಇದರಿಂದ ವಿನಾಯಿತಿ ನೀಡಬೇಕು ಎಂದರು.
5, 10 ಸೆಂಟ್ಸ್ನಲ್ಲಿ ಮನೆ ನಿರ್ಮಾಣ ಮಾಡುವವರಿಗೆ ಭೂಪರಿವರ್ತನೆಯಿಂದ ರಿಯಾಯಿತಿ ನೀಡಬೇಕು, ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೆ ನಿರ್ಮಿಸಿದ ಬಡಾವಣೆಗಳಿಗೆ ಸ್ವಲ್ಪ ದಂಡ ವಿಧಿಸಬೇಕು ಹಾಗೂ ಹಿಂದಿನಂತೆ ಸಿಂಗಲ್ ಲೇಔಟ್ಗೆ ಅನುಮತಿ ನೀಡಬೇಕು.
50ಸೆಂಟ್ಸ್ವರೆಗಿನ ಜಮೀನಿನ ಭೂಪರಿವರ್ತನೆಗೆ ತಹಶೀಲ್ದಾರರಿಗೆ ಅಧಿಕಾರ ನೀಡಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಕಟ್ಟಡ ಪರವಾನಗಿ ನೀಡಲು ಪ್ರಾಧಿಕಾರದ ಅನುಮತಿ ಪಡೆಯುವುದನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.
ಕಂದಾಯ ಇಲಾಖೆ ಸಿಬ್ಬಂದಿಗಳಿಂದ ಪಹಣಿಯಲ್ಲಾದ ದೋಷವನ್ನು ಸರಿಪಡಿಸಲು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಸಾವಿರಾರು ರೂಪಾಯಿ ಖರ್ಚು ಮಾಡುವುದನ್ನು ತಡೆಯಲು, 9– 11 ಕಲಂ ತಿದ್ದುಪಡಿ ಮಾಡಲು ತಹಶೀಲ್ದಾರರಿಗೆ ಅಧಿಕಾರ ನೀಡಬೇಕು ಎಂದು ಅವರು ಸರ್ಕಾರವನ್ನು ವಿನಂತಿಸಿದರು.
ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ, ಪದಾಧಿಕಾರಿಗಳಾದ ಕಿಶೋರ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಬ್ಯಾಪ್ಟಿಸ್ಟ್ ಡಯಾಸ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.