ಬೈಂದೂರು: ರಾಜ್ಯದ ಮತದಾರರು ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಭ್ರಮನಿರಸನಗೊಂಡು, ಈ ಬಾರಿ ಬಿಜೆಪಿಗೆ ಅಧಿಕ ಸ್ಥಾನ ನೀಡಿದ್ದರು. ಶಾಸಕರ ಸಂಖ್ಯಾಬಲದ ಕೊರತೆಯಿಂದ ಬಹುಮತ ಸಿಗಲಿಲ್ಲ. ಅದರಿಂದಾಗಿ ಜಿಜೆಪಿಗೆ ಆಡಳಿತ ನಡೆಸುವ ಅವಕಾಶ ಸಿಗಲಿಲ್ಲ. ಆದರೆ, ತಿಂಗಳು ಕಳೆದರೂ ಈಗಿನ ಸಮ್ಮಿಶ್ರ ಸರ್ಕಾರ ಜನಪರ ಕಾರ್ಯ ಮಾಡುತ್ತಿಲ್ಲ. ಆರು ತಿಂಗಳ ಒಳಗೆ ಸರ್ಕಾರ ಪತನಗೊಳ್ಳಲಿದೆ. ಮತ್ತೆ ಯಡಿಯೂರಪ್ಪ ಅವರು ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಯಡ್ತರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಾಡಿ ಶ್ರೀವನದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಮದ್ದೋಡಿ ಮತ್ತು ಆಲಂದೂರು ಭಾಗದ ಗ್ರಾಮಸ್ಥರಿಂದ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಸೇವೆ ಸಲ್ಲಿಸುತ್ತ ಬಂದಿದ್ದು, ಜನರು ಈ ಬಾರಿ ಶಾಸಕ ಸ್ಥಾನ ನೀಡಿದ್ದಾರೆ. ನನ್ನ ಅವಧಿಯಲ್ಲಿ ಕ್ಷೇತ್ರದಾದ್ಯಂತ ಅನ್ಯಾಯ, ಮೋಸ, ಭ್ರಷ್ಟಾಚಾರಗಳಿಗೆ ಅವಕಾಶ ನೀಡದೆ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವುದೇ ನನ್ನ ಮೊದಲ ಆದ್ಯತೆ ಎಂದು ಅವರು ಹೇಳಿದರು.
ನಿರೀಕ್ಷೆಗೂ ಮೀರಿದ ಅಂತರದಿಂದ ಗೆಲ್ಲಿಸಿದ ಕ್ಷೇತ್ರದ ಜನತೆಯ ಸೇವಕನಾಗಿ ಕೆಲಸ ಮಾಡುವೆ ಎಂದು ಅವರು ಹೇಳಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಸ್ಥರು ಕ್ಷೇತ್ರದ ನೂತನ ಶಾಸಕರನ್ನು ಸನ್ಮಾನಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎನ್. ದೀಪಕ್ಕುಮಾರ್ ಶೆಟ್ಟಿ, ಗ್ರಾಮದ ಹಿರಿಯರಾದ ಅಬ್ಬಣ್ಣ ಮೊಗವೀರ, ಉದ್ಯಮಿ ಶರತ್ಕುಮಾರ್ ಶೆಟ್ಟಿ, ಯಡ್ತರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ, ಕುಪ್ಪಯ್ಯ ಮರಾಠಿ ಹಲವರು ಇದ್ದರು. ಜೈಸನ್ ಎಂ.ಡಿ. ಸ್ವಾಗತಿಸಿ, ಪಿ.ಐ. ಬೇಬಿ ಮಾಸ್ಟರ್ ವಂದಿಸಿದರು. ಶಿಕ್ಷಕ ತಗ್ಗರ್ಸೆ ತಿಮ್ಮಪ್ಪ ಗಾಣಿಗ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.