ADVERTISEMENT

ಹಾಲಾಡಿ `ಜನಸೇವಾ ಕೇಂದ್ರ' ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2013, 9:22 IST
Last Updated 5 ಏಪ್ರಿಲ್ 2013, 9:22 IST

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರದ ಹಳೆ ಅಂಚೆ ಕಚೇರಿ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಚುನಾವಣಾ ಪ್ರಚಾರ ಕಚೇರಿ `ಜನಸೇವಾ ಕೇಂದ್ರ' ವನ್ನು ಬುಧವಾರ ಸಂಜೆ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀಧರ ಕಾಮತ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರಳ ಹಾಗೂ ಸಜ್ಜನತೆಯಿಂದಾಗಿ ರಾಜ್ಯದ ಜನರು ಮೆಚ್ಚುವ ರೀತಿಯಲ್ಲಿ ಜನಸೇವೆ ಮಾಡಿದ ಹಾಲಾಡಿ ಅವರಂತಹ ಆದರ್ಶವಾದಿಗಳು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದರೆ ಅದು ಸಮಾಜಕ್ಕೆ ಗೌರವ.

ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಬೆಂಗಳೂರಿಗೆ ಕರೆಸಿಕೊಂಡು ಅವಮಾನ ಮಾಡಿದ ಘಟನೆಯಿಂದ ದುಃಖಿತಾಗಿರುವ ಅವರ ಅಭಿಮಾನಿಗಳಿಗೆ ಅವರ ಮೇಲಿರುವ ಅಭಿಮಾನವನ್ನು ಸಾಬೀತುಗೊಳಿಸುವ ಸಮಯ ಇದೀಗ ಬಂದಿದೆ ಎಂದು ಹೇಳಿದ ಅವರು ಹಾಲಾಡಿ ಅವರ ಸಮಾಜಕ್ಕೆ ನೀಡಿರುವ ಕೊಡುಗೆಗಳ ಋಣ ತೀರಿಸಲು ಅವರ ಅಭಿಮಾನಿಗಳು ಸಂಕಲ್ಪ ಮಾಡಬೇಕು ಎಂದು ನುಡಿದರು.

ಹಾಲಾಡಿಯವರ ನಿಕಟವರ್ತಿಗಳಾದ ಕಿರಣ್‌ಕುಮಾರ ಕೊಡ್ಗಿ, ಬೆಳ್ವೆ ವಸಂತ ಶೆಟ್ಟಿ, ರಾಮಣ್ಣ ಶೆಟ್ಟಿ ಅಂಕದಕಟ್ಟೆ, ಕೆ.ಪ್ರೇಮಾನಂದ ಶೆಟ್ಟಿ ಕಟ್ಕೇರೆ, ಶೇಷಗಿರಿ ಗೋಟ, ಸುಧೀರ್‌ಕುಮಾರ ಶೆಟ್ಟಿ ಮಾರ್ಕೋಡು, ಇಸ್ಮಾಯಿಲ್ ಸಾಹೇಬ್, ಕೋಟೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಶ್ರೀಯಾನ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಂಜು ಬಿಲ್ಲವ, ಲಕ್ಷಣ, ಭಾಸ್ಕರ ಪೂಜಾರಿ, ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಕ್ವಾಡಿ ಪ್ರಭಾಕರ ಶೆಟ್ಟಿ, ಕುಂಭಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದ ಪುತ್ರನ್, ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ, ಕುಂದಾಪುರ ಪುರಸಭಾ ಸದಸ್ಯರಾದ ರಾಘವೇಂದ್ರ ದೇವಾಡಿಗ, ಕೆ.ನಾಗರಾಜ್ ರಾವ್ ಉಪಸ್ಥಿತರಿದ್ದರು.

ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಡಾ.ಸುಧಾಕರ ನಂಬಿಯಾರ್ ಸ್ವಾಗತಿಸಿದರು, ನಾರಾಯಣ ಪೈಂಟರ್ ನಿರೂಪಿಸಿದರು, ಸುರೇಶ್ ಶೆಟ್ಟಿ ವಂದಿಸಿದರು.

ಬಿಜೆಪಿಗೆ ಗುಡ್ ಬೈ ಹಾಲಾಡಿಗೆ ಜೈ: ಕೋಟೇಶ್ವರದಲ್ಲಿ ಬುಧವಾರ ನಡೆದ ಹಾಲಾಡಿ ಚುನಾವಣಾ ಪ್ರಚಾರ ಕಚೇರಿಯಾದ `ಜನಸೇವಾ ಕೇಂದ್ರ' ಉದ್ಘಾಟನೆಯ ವೇಳೆ ಕಾರ್ಯಕರ್ತರು ಬಿಜೆಪಿಗೆ ಬೈ ಹಾಲಾಡಿ ಜೈಕಾರ ಹಾಕುತ್ತಿದ್ದರು.  ಈ ಹಿಂದೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಕೋಟೇಶ್ವರ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಕುಂದಾಪುರ ಪುರಸಭೆಗೆ ಆಯ್ಕೆಯಾಗಿದ್ದ ಸದಸ್ಯರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.