ADVERTISEMENT

‘ಪರಂಪರೆಯ ವಾರಿಸುದಾರರು ಯುವಜನತೆ’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 10:16 IST
Last Updated 21 ಸೆಪ್ಟೆಂಬರ್ 2013, 10:16 IST

ಮಂಗಳೂರು: ‘ಯಕ್ಷಗಾನದಂತದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ವಾರಿಸುದಾರರು ನಾವು ಎಂಬ ಎಚ್ಚರಿಕೆ ಯುವಜನರಲ್ಲಿ ಇರಬೇಕು. ಈ ಪರಂಪರೆಯನ್ನು ಉಳಿಸಿ, ಬೆಳೆಸಿ, ವಿಸ್ತರಿಸುವ ಜವಾಬ್ದಾರಿ ಅವರ ಮೇಲಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಚಿನ್ನಪ್ಪ ಗೌಡ ಅವರು ಹೇಳಿದರು.

ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ಪುರಭವನದಲ್ಲಿ ಶುಕ್ರವಾರ ನಡೆದ ‘ಶ್ರೀಮಯ ಯಕ್ಷ ತ್ರಿವೇಣಿ’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ‘ಯಕ್ಷಗಾನದಂತಹ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹೇಗೆ ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಿದೆ. ಪುಸ್ತಕ ರೂಪದಲ್ಲಿ, ಸಾಹಿತ್ಯದ ಮೂಲಕ ಅಥವಾ ವಸ್ತುಸಂಗ್ರಹಾಲಯಗಳ ಮೂಲಕ ಈ ಕಾರ್ಯ ಸಾಧ್ಯವೇ? ನಮ್ಮದು ಭಾಷೆ, ಸಾಹಿತ್ಯ, ಆರಾಧನೆ, ಲಲಿತಕಲೆಗಳ ಪರಂಪರೆಯಲ್ಲಿ ಶ್ರೀಮಂತವಾದ ನಾಡು.

ವಿದ್ಯಾರ್ಥಿ ಸಮುದಾಯ ಸಾಂಸ್ಕೃತಿಕ ವಿಷಯಗಳಲ್ಲಿ ಯಾವತ್ತೂ ಆಸಕ್ತಿ ಕಳೆದುಕೊಳ್ಳಬಾರದು’ ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.
ಯಕ್ಷಗಾನ ವಿಮರ್ಶಕ ಡಾ.ಎಂ. ಪ್ರಭಾಕರ ಜೋಷಿ ಮಾತನಾಡಿ, ‘ಯಕ್ಷಗಾನದ ವಿಸ್ತರಣೆಯಲ್ಲಿ ಇಡಗುಂಜಿ ಮೇಳ ಸಾಕಷ್ಟು ಕೊಡುಗೆ ನೀಡಿದೆ. ಈ ಮೇಳವು  ಕಾಲೋಚಿತ ಹಾಗೂ ಕಲೋಚಿತ ಸುಧಾರಣೆಗಳ ಮೂಲಕ ವಿಭಿನ್ನ ಸಾಧನೆ ಮಾಡಿದೆ’ ಎಂದರು.

ಗೋಕರ್ಣನಾಥ ಕಾಲೇಜಿನ ಪ್ರಾಧ್ಯಾ ಪಕ ಡಾ.ನರಸಿಂಹ ಮೂರ್ತಿ, ರಥ ಬೀದಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾ ಕೃಷ್ಣ, ಇಡಗುಂಜಿ ಮೇಳದ ಕೆರೆಮನೆ ಶಿವಾನಂದ ಹೆಗಡೆ, ಸಂಘಟಕ ನರಸಿಂಹ ಹೆಗಡೆ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.