ADVERTISEMENT

‘ಪ್ರಾಕೃತಿಕ ವಿಕೋಪ: ತ್ವರಿತ ರಕ್ಷಣೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 9:39 IST
Last Updated 13 ಮಾರ್ಚ್ 2014, 9:39 IST

ಉಡುಪಿ: ‘ಪ್ರಾಕೃತಿಕ ಅಥವಾ ಮಾನವ ನಿರ್ಮಿತ ವಿಕೋಪ ಸಂಭವಿಸಿದ ತಕ್ಷಣ ರಕ್ಷಣಾ ಕಾರ್ಯ ಕೈಗೊಂಡರೆ ಪರಿಣಾಮಕಾರಿಯಾಗಿ ಸನ್ನಿವೇಶ ನಿರ್ವಹಣೆ ಮಾಡಲು ಸಾಧ್ಯ. ಕಡಿಮೆ ಅವಧಿಯಲ್ಲಿ ಪ್ರತಿಕ್ರಿಯೆ ತೋರುವುದು ಬಹಳ ಮುಖ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಂ. ಕನಗವಲ್ಲಿ ಹೇಳಿದರು.

ಆಡಳಿತ ಮತ್ತು ತರಬೇತಿ ಸಂಸ್ಥೆ ಹಾಗೂ ಉಡುಪಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನಾ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

2004ರಲ್ಲಿ ಸುಮಾಮಿ ದುರಂತ ಸಂಭವಿಸಿದ ನಂತರ ಪ್ರತಿ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕಗಳನ್ನು ಆರಂಭಿಸಲಾಗಿದೆ. ವ್ಯಕ್ತಿ ಮತ್ತು ಸಂಪನ್ಮೂಲ ಸರಿಯಾದ ಸಮಯದಲ್ಲಿ ಒಟ್ಟಾದಾಗ ಪರಿಹಾರ ಕಾರ್ಯಗಳು ಉತ್ತಮವಾಗಿರುತ್ತವೆ ಎಂದು ಅವರು ಹೇಳಿದರು.

ಆಡಳಿತ ತರಬೇತಿ ಕೇಂದ್ರದ ಸಿಬ್ಬಂದಿ ಡಾ.ಆರ್‌. ಧರ್ಮರಾಜು ಮಾತನಾಡಿ, 30 ಜಿಲ್ಲೆಗಳಲ್ಲಿ ನಾಲ್ಕು ವರ್ಷದ ಹಿಂದೆ ವಿಕೋಪ ನಿರ್ವಹಣಾ ಯೋಜನೆ ಜಾರಿ­ಗೊಳಿಸ­ಲಾಗಿದೆ. ಸ್ವಯಂ ಚಾಲಿತ ವಿಕೋಪ ನಿರ್ವಹಣಾ ಯೋಜನೆ­ ಯನ್ನು ರಾಯಚೂರಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿ ಯಶಸ್ಸು ಗಳಿಸಲಾಯಿತು. ಡಿಸೆಂಬರ್‌ ಒಳಗೆ ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.

ವಿಕೋಪ ನಿರ್ವಹಣೆಗಾಗಿ ಪ್ರತ್ಯೇಕ ಸಾಫ್ಟ್‌ವೇರ್‌ ತಯಾರಿಸಲಾಗಿದೆ. ಎಲ್ಲ ಗ್ರಾಮಗಳ ಸಂಪನ್ಮೂಲ ಮತ್ತು ಅದರ ಸವಿವರಗಳನ್ನು ಪಡೆದು ಸರ್ವರ್‌ನಲ್ಲಿ ಲೋಡ್‌ ಮಾಡಲಾಗುತ್ತದೆ. ಪ್ರತಿ ಗ್ರಾಮಕ್ಕೊಂದು ಮೊಬೈಲ್‌ ಸಾಧನವನ್ನೂ ಕೊಡಲಾಗುತ್ತದೆ. ವಿಪತ್ತು ಸಂಭವಿಸಿದೊಡನೆ ಸರ್ವರ್‌ಗೆ ಮಾಹಿತಿ ನೀಡಿದರೆ ಕಾರ್ಯಾಚರಣೆಯ ರೂಪುರೇಷೆ ಸ್ವಯಂಚಾಲಿತವಾಗಿ ತಯಾರಾಗುತ್ತದೆ. ಯಾವ ಸಂಪನ್ಮೂಲ ಮತ್ತು ಯಾವ ವ್ಯಕ್ತಿಯನ್ನು ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧಿರಿಸಿ ಮಾಹಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ. ಪ್ರಾಣೇಶ್‌ ರಾವ್‌ ಉಪಸ್ಥಿತರಿದ್ದರು. ಡಾ. ಜಿ. ವಿಶ್ವನಾಥ್‌ ಸ್ವಾಗತಿಸಿ ವಂದನಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.