ADVERTISEMENT

ಉಡುಪಿ: ಗದ್ದೆಗಿಳಿದು ಭತ್ತದ ನಾಟಿ ಮಾಡಿದ ನಟ ರಕ್ಷಿತ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 15:02 IST
Last Updated 18 ಜುಲೈ 2021, 15:02 IST
ನಟ ರಕ್ಷಿತ್ ಶೆಟ್ಟಿ ಭಾನುವಾರ ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿಯಲ್ಲಿ ಗದ್ದೆಗಳಿದು ಭತ್ತದ ನಾಟಿ ಮಾಡಿದರು.
ನಟ ರಕ್ಷಿತ್ ಶೆಟ್ಟಿ ಭಾನುವಾರ ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿಯಲ್ಲಿ ಗದ್ದೆಗಳಿದು ಭತ್ತದ ನಾಟಿ ಮಾಡಿದರು.   

ಉಡುಪಿ: ನಟ ರಕ್ಷಿತ್ ಶೆಟ್ಟಿ ಭಾನುವಾರ ಬ್ರಹ್ಮಾವರ ತಾಲ್ಲೂಕಿನ ವಾರಂಬಳ್ಳಿಯಲ್ಲಿ ಗದ್ದೆಗಿಳಿದು ಭತ್ತದ ನಾಟಿ ಮಾಡಿದರು. ಸಾಂಪ್ರದಾಯಿಕ ಅಡಿಕೆ ಹಾಳೆಯ ಟೋಪಿ ಧರಿಸಿದ್ದ ರಕ್ಷಿತ್ ಶೆಟ್ಟಿಯನ್ನು ನೋಡಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

ಕೇದಾರೋತ್ಥಾನ ಟ್ರಸ್ಟ್‌ ಹಮ್ಮಿಕೊಂಡಿದ್ದ ಹಡಿಲುಭೂಮಿ ಕೃಷಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ರಕ್ಷಿತ್ ಶೆಟ್ಟಿ, ‘ಒತ್ತಡದ ನಡುವೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಖುಷಿ ಕೊಟ್ಟಿದೆ. ಚಿಕ್ಕವನಾಗಿದ್ದಾಗ ಕಣ್ಣು ಹಾಯಿಸಿದಷ್ಟು ಭೂಮಿಯಲ್ಲಿ ಭತ್ತದ ಕೃಷಿ ಕಾಣುತ್ತಿತ್ತು. ಕಳೆದ 10 ರಿಂದ 15 ವರ್ಷಗಳಲ್ಲಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ನನ್ನ ತಂದೆ ಇಂದಿಗೂ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದರು.

ಹಿಂದೆ, ಕರಾವಳಿಯಲ್ಲಿ ಕೃಷಿಯೇ ಪ್ರಧಾನವಾಗಿತ್ತು. ನಗರಗಳತ್ತ ಯುವಕರು ವಲಸೆ ಹೋಗಿದ್ದರಿಂದ ಕೃಷಿ ಕಡಿಮೆಯಾಯಿತು. ಈಗ ಮತ್ತೆ ಕೃಷಿಯತ್ತ ಒಲವು ಶುರುವಾಗಿದೆ. ಬೆಂಗಳೂರಿಗೆ ದುಡಿಯಲು ಬಂದಿದ್ದವರು ಕೃಷಿ ಮಾಡಲು ತವರಿನತ್ತ ಮುಖ ಮಾಡುತ್ತಿದ್ದಾರೆ. ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಹೆಚ್ಚಿನ ಯುವಕರು ಕೃಷಿಯತ್ತ ಮುಖಮಾಡುತ್ತಿದ್ದಾರೆ ಎಂದರು.

ADVERTISEMENT
ಭತ್ತ ನಾಟಿ ಮಾಡಿದ ನಟ ರಕ್ಷಿತ್ ಶೆಟ್ಟಿ

‘ಹಡಿಲುಭೂಮಿ ಕೃಷಿ ಆಂದೋಲನ’ ಕೂಡ ಉಡುಪಿ ಹಾಗೂ ಮಂಗಳೂರಿನ ಯುವಕರನ್ನು ಮತ್ತೆ ಕೃಷಿಯತ್ತ ಸೆಳೆಯುತ್ತದೆ ಎಂಬ ವಿಶ್ವಾಸವಿದೆ. ಇಂತಹ ಕಾರ್ಯಕ್ರಮಗಳ ಭಾಗವಾಗಿರುವುದಕ್ಕೆ ಸಂತೋಷವಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದರು.

ಕೇದಾರೋತ್ಥಾನ ಟ್ರಸ್ಟ್‌ ಹಮ್ಮಿಕೊಂಡಿದ್ದ ಹಡಿಲುಭೂಮಿ ಕೃಷಿ ಆಂದೋಲನಕ್ಕೆ ಚಾಲನೆ ನೀಡಿದ ರಕ್ಷಿತ್ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.