ADVERTISEMENT

ಜಾತಿ ಕಾಲಂ ರದ್ದು ಮಾಡಿ: ಅದಮಾರು ಸ್ವಾಮೀಜಿ

ಕೃಷ್ಣಮಠದಲ್ಲಿ ಕನ್ನಡ ನಾಮಫಲಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 15:30 IST
Last Updated 3 ಡಿಸೆಂಬರ್ 2020, 15:30 IST
ಉಡುಪಿಯ ಕೃಷ್ಣಮಠದ ಮುಖ್ಯದ್ವಾರದ ಗೋಪುರಕ್ಕೆ ಗುರುವಾರ ಕನ್ನಡ ನಾಮಫಲಕ ಹಾಕಲಾಯಿತು.
ಉಡುಪಿಯ ಕೃಷ್ಣಮಠದ ಮುಖ್ಯದ್ವಾರದ ಗೋಪುರಕ್ಕೆ ಗುರುವಾರ ಕನ್ನಡ ನಾಮಫಲಕ ಹಾಕಲಾಯಿತು.   

ಉಡುಪಿ: ಸರ್ಕಾರಕ್ಕೆ ಜಾತಿ ಪದ್ಧತಿ ನಿರ್ಮೂಲನೆಯ ಬಗ್ಗೆ ಕಾಳಜಿ ಇದ್ದರೆ ಸರ್ಕಾರಿ ದಾಖಲೆಗಳಲ್ಲಿ ಜಾತಿಯ ಕಾಲಂ ರದ್ದು ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.

ರಥಬೀದಿಯಲ್ಲಿರುವ ಕನಕಗುಡಿ ಮುಂಭಾಗದಲ್ಲಿ ಗುರುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಜಾತಿ ನಿರ್ಮೂಲನೆಯಾಗಬೇಕು ಎನ್ನುವ ಸರ್ಕಾರ ಜಾತಿ ಕಾಲಂ ರದ್ದು ಮಾಡಲಿ’ ಎಂದರು.

ಎಲ್ಲರಿಗೂ ಸಂಸ್ಕಂತ ಕಲಿಸುವ ಕಾರ್ಯ ಆಗಬೇಕು. ಇದರಿಂದ ಶಾಸ್ತ್ರಗಳಲ್ಲಿರುವ ವಿಚಾರಗಳನ್ನು ಜನಸಾಮಾನ್ಯರೂ ಅರಿಯಬಹುದು ಎಂದು ಸ್ವಾಮೀಜಿ ಸಲಹೆ ನೀಡಿದರು.

ADVERTISEMENT

ಕನ್ನಡಕ್ಕೆ ಗೌರವ:

ತುಳುನಾಡಿನಲ್ಲಿ ಕನ್ನಡ ಉಳಿಸುವ ಕಾರ್ಯವನ್ನು ಇಲ್ಲಿನವರು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದಾರೆ. ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುವ 99ರಷ್ಟು ಕಾರ್ಯಕ್ರಮಗಳು ಕನ್ನಡ ಭಾಷೆಯಲ್ಲೇ ನಡೆಯುತ್ತಿವೆ ಎಂದು ಕನ್ನಡ ನಾಮಫಲಕ ತೆರವು ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.

ಕನ್ನಡ ನಾಮಫಲಕ ಅಳವಡಿಕೆ:

ಕೃಷ್ಣಮಠದ ಮುಖ್ಯದ್ವಾರದಲ್ಲಿದ್ದ ಕನ್ನಡ ನಾಮಫಲಕ ತೆರವಿಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗುರುವಾರ ಮಠದಿಂದ ಕನ್ನಡ ನಾಮಫಲಕ ಹಾಕಲಾಗಿದೆ. ಮಠದ ಗೋಪುರದ ಮೇಲೆ ‘ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀಕೃಷ್ಣಮಠ’ ಎಂಬ ಫಲಕ ರಾರಾಜಿಸುತ್ತಿದೆ.

ಈಚೆಗೆ ಮಠದಲ್ಲಿ ಕನ್ನಡ ನಾಮಫಲಕ ತೆರವಿಗೆ ಜಿಲ್ಲಾ ಕಸಾಪ ಸೇರಿ ಹಲವು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆ ನೀಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.