ADVERTISEMENT

‘ಶಬರಿಮಲೆಗೆ ಹೋಗುವ ಬದಲು ಭವನಂ ಸನ್ನಿಧಾನಂ’

ಯಾತ್ರೆಗೆ ಕೇರಳ ಸರ್ಕಾರದ ಕಠಿಣ ನಿಯಮಗಳ ಜಾರಿ: ವ್ರತಾಧಾರಿಗಳ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 3:18 IST
Last Updated 5 ಡಿಸೆಂಬರ್ 2020, 3:18 IST

ಉಡುಪಿ: ಶಬರಿಮಲೆ ಪ್ರವೇಶಕ್ಕೆ ಹಲವು ಬಾರಿ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂಬ ನಿಯಮವನ್ನು ಕೇರಳ ಸರ್ಕಾರ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲೆಯ ಅಯ್ಯಪ್ಪ ಭಕ್ತರು ‘ಭವನಂ ಸನ್ನಿಧಾನಂ’ ಅಭಿಯಾನ ಆರಂಭಿಸಿದ್ದಾರೆ.

ಜಿಲ್ಲೆಯಿಂದ ಪ್ರತಿ ವರ್ಷ ಸಾವಿರಾರು ಮಾಲಾಧಾರಿಗಳು ವ್ರತಾಚರಣೆಯೊಂದಿಗೆ ಕೇರಳದ ಶಬರಿಮಲೆಗೆ ತೆರಳುತ್ತಿದ್ದರು. ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕೆ ಹೆಚ್ಚಿನ ಭಕ್ತರು ಹೋಗುತ್ತಿದ್ದರು. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆ ಕಷ್ಟವಾಗಿದೆ. ಇದರ ನಡುವೆ ಕೇರಳ ಸರ್ಕಾರ ಯಾತ್ರೆ ಕೈಗೊಳ್ಳುವ ವ್ರತಧಾರಿಗಳು ಶಬರಿಮಲೆ ಪ್ರವೇಶಕ್ಕೆ ಕಠಿಣ ನಿಯಮಾವಳಿಗಳನ್ನು ವಿಧಿಸಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಿಂದ ಕೇರಳಕ್ಕೆ ತೆರಳುವ ಭಕ್ತರು ಸ್ಥಳೀಯವಾಗಿ ಹಾಗೂ ಕೇರಳ ಪ್ರವೇಶದ ನಂತರ ಕೋವಿಡ್ ಪರೀಕ್ಷೆಗೊಳಪಡಬೇಕು. ಬಳಿಕ ಪಂಪಾ ನದಿ ತೀರದ ಬಳಿ ಮ ತ್ತೆ ಪರೀಕ್ಷೆ ಮಾಡಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಈ ನಿಯಮ ಭಕ್ತರಿಗೆ ದುಬಾರಿಯಾಗಿದ್ದು, ವ್ರತಧಾರಿಗಳಿಗೆ ಸಮಸ್ಯೆಯಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪಂಪಾ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಅವಕಾಶವಿಲ್ಲ. ಇರುಮುಡಿಯನ್ನು ತಲೆ ಮೇಲೆ ಹೊತ್ತು ಪಡಿ ಏರಲು ಅನುಮತಿ ನೀಡಲಾಗಿಲ್ಲ. ಭಕ್ತರು ಕೊಂಡೊಯ್ದ ತುಪ್ಪ ಕಾಯಿಯನ್ನು ಅಭಿಷೇಕ ಮಾಡಿದ ಬಳಿಕ ವಾಪಾಸು ನೀಡುವುದಿಲ್ಲ ಎಂಬ ನಿಯಮಗಳನ್ನು ಕೇರಳ ಸರ್ಕಾರ ಮಾಡಿದೆ ಎಂದರು.

ಇಷ್ಟೆಲ್ಲ ನಿಯಮಗಳನ್ನು ಪಾಲಿಸಿ ಅಯ್ಯಪ್ಪನ ಸನ್ನಿಧಿಗೆ ತೆರಳುವ ಬದಲು ಶಬರಿ ಮಲೆಗೆ ತೆರಳದಿರುವುದು ಲೇಸು ಎಂದು ತೀರ್ಮಾನಿಸಲಾಗಿದೆ. ಜಿಲ್ಲೆಯ 54 ಶಿಬಿರಗಳ ಗುರುಸ್ವಾಮಿಗಳು ಮಲ್ಪೆಯ ಅಯ್ಯಪ್ಪ ಮಂದಿರದಲ್ಲಿ ಸಭೆ ಸೇರಿ ಶಬರಿ ಮಲೆಗೆ ಹೋಗುವ ಬದಲು ‘ಭವನಂ ಸನ್ನಿಧಾನಂ’ ಅಭಿಯಾನ ಆರಂಭಿಸಲು ನಿರ್ಧರಿಸಿದ್ದೇವೆ. ವ್ರತಧಾರಿಗಳು ಮನೆಯಲ್ಲಿಯೇ ಕಟುಂಬ ಸಮೇತ ಅಯ್ಯಪ್ಪನ ಆರಾದನೆ ಮಾಡುವುದು ಅಭಿಯಾನದ ಉದ್ದೇಶ ಎಂದರು.

ಮಕರ ಜ್ಯೋತಿಯಂದು ವಿಶೇಷ ಪೂಜೆ, ಸಂತರ್ಪಣೆ:

ಉಡುಪಿ, ದಕ್ಷಿಣ ಕನ್ನಡ, ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಯ್ಯಪ್ಪ ಭಕ್ತರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಅಯ್ಯಪ್ಪ ಮಂದಿರಗಳಲ್ಲಿ ಹಾಗೂ ಶಿಬಿರ ಸ್ಥಳಗಳಲ್ಲಿ ಮಕರ ಜ್ಯೋತಿ ದರ್ಶನದ ದಿನ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಸಲು ಮುಖಂಡರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.