ಉಡುಪಿ:ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಅಸ್ಪತ್ರೆಗೆ ಸರಬರಾಜಾದ ಕುಡಿಯುವ ನೀರಿನಲ್ಲಿ ಕಿಡಿಗೇಡಿಗಳು ಆಲ್ಕೋಹಾಲ್ ಬೆರೆಸಿದ್ದಾರೆ ಎಂದು ಆಸ್ಪತ್ರೆಯ ಮ್ಯಾನೇಜರ್ ಪ್ರಶಾಂತ್ ಮಲ್ಯ ಎಂಬುವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆಸ್ಪತ್ರೆಗೆ ಪೂರೈಕೆಯಾದ ನೀರಿನಲ್ಲಿ ಆಲ್ಕೋಹಾಲ್ ಅಂಶ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ರೋಗಿಗಳ ಜೀವಕ್ಕೆ ಸಂಚಕಾರ ತರಲು ಯತ್ನಿಸಿದವರ ಹಾಗೂ ಆಸ್ಪತ್ರೆಯ ಗೌರವಕ್ಕೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಪ್ರಕರಣದ ವಿವರ:ಮೇ 13ರಂದು ಅಜಿತ್ ಎಂಬಾತ ಆಸ್ಪತ್ರೆಗೆ ನೀರಿನ ಕ್ಯಾನ್ ಡೆಲಿವರಿ ಮಾಡಿದ್ದರು. 3 ಕ್ಯಾನ್ಗಳ ಮೇಲೆ ಲೇಬಲ್ ಇಲ್ಲದ್ದಕ್ಕೆ ವಾಪಸ್ ಕಳಿಸಿ 3 ಕ್ಯಾನ್ಗಳನ್ನು ಮಾತ್ರ ಸ್ವೀಕರಿಸಲಾಗಿತ್ತು.
ಅವುಗಳ ಪೈಕಿ ಬ್ಯಾಚ್ ನಂಬರ್ 21/2017 ಕ್ಯಾನ್ನಲ್ಲಿದ್ದ ನೀರನ್ನುಜುಲೈ 4 ರಂದು ಆಸ್ಪತ್ರೆಯ ಹ್ಯೂಮಿಡಿಫೈಯರ್ಗೆ ಭರ್ತಿ ಮಾಡಲಾಗಿತ್ತು. ಅಂದು ಮಧ್ಯಾಹ್ನ ಆಸ್ಪತ್ರೆಯ ಸಿಬ್ಬಂದಿಯ ಕೈಮೇಲೆ ನೀರು ಬಿದ್ದಾಗ ಹಿಮದ ಅನುಭವವಾಗಿತ್ತು. ತಕ್ಷಣ ವಾಸನೆ ಪರಿಶೀಲಿಸಿದಾಗ ಸ್ಪಿರಿಟ್ ವಾಸನೆ ಬಂತು. ಆ ನೀರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಅದರಲ್ಲಿ ಶೇ 53.43ರಷ್ಟು ಆಲ್ಕೋಹಾಲ್ ಅಂಶ ಇರುವುದು ಪತ್ತೆಯಾಗಿದೆ ಎಂದು ಪ್ರಶಾಂತ್ ಮಲ್ಯ ದೂರಿನಲ್ಲಿ ವಿವರಿಸಿದ್ದಾರೆ.
ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.