
ಉಡುಪಿ: ಇಂದಿನ ಕಲುಷಿತ ವಾತಾವರಣದಲ್ಲಿ ಮಾಧ್ಯಮಗಳು, ಲಲಿತ ಕಲೆಗಳು, ರಂಗಭೂಮಿ ಜನರಿಗೆ ಮಾರ್ಗದರ್ಶನ ಮಾಡುವ ಅಗತ್ಯ ಇದೆ ಎಂದು ಸಾಹಿತಿ ಫಕೀರ್ ಮುಹಮ್ಮದ್ ಕಟಪಾಡಿ ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾನುವಾರ ‘ಕರಾವಳಿಯ ನಿರ್ದಿಗಂತ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ರಾಜಕೀಯ ಸುಳ್ಳುಗಳು ಬಹಳಷ್ಟು ಕ್ರೂರ ರೂಪದಲ್ಲಿ ನಮ್ಮ ಮುಂದೆ ನಿಂತಿವೆ. ಆ ಕ್ರೂರ ಸುಳ್ಳುಗಳನ್ನು ಎದುರಿಸಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ರಂಗಭೂಮಿಯ ಮೂಲಕ ಅವುಗಳನ್ನು ಮಣಿಸುವ ಪ್ರಯತ್ನ ಅಗತ್ಯವಾಗಿದೆ ಎಂದರು.
‘ನಿರ್ದಿಗಂತ’ ಎಂಬ ಶಬ್ದವೇ ನಮ್ಮನ್ನು ವಿಭಿನ್ನ ಪ್ರಪಂಚಕ್ಕೆ ಕರೆದೊಯ್ಯುವ ಶಕ್ತಿ ಹೊಂದಿದೆ. ಕುವೆಂಪು ಅವರು ಸೃಷ್ಟಿಸಿದ ನಿರ್ದಿಗಂತದ ಕಲ್ಪನೆಯನ್ನು ಪ್ರಕಾಶ್ ರಾಜ್ ಅವರು ಇನ್ನಷ್ಟು ವಿಶಾಲಗೊಳಿಸಿದ್ದಾರೆ. ನಿರ್ದಿಗಂತ ತಂಡದ ಉದ್ದೇಶಗಳು ಯಶಸ್ವಿಯಾಗಲಿ ಎಂದು ಹೇಳಿದರು.
ನಿರ್ದಿಗಂತದ ಸ್ಥಾಪಕ, ಚಿತ್ರನಟ ಪ್ರಕಾಶ್ ರಾಜ್ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮೊದಲು ಪ್ರಕಾಶ್ ರಾಜ್ ಹಾಗೂ ನಿರ್ದಿಗಂತ ತಂಡದಿಂದ ಸಮತೆಯ ಹಾಡು ಪ್ರಸ್ತುತ ಪಡಿಸಲಾಯಿತು.
ಮೂರು ದಶಕಗಳಿಂದ ರಂಗಭೂಮಿಯಿಂದ ದೂರವಾಗಿ ಸಿನಿಮಾ ಕ್ಷೇತ್ರದಲ್ಲೇ ಇದ್ದೆ. ಕೆಲವು ವರ್ಷಗಳಿಂದ ಮತ್ತೆ ರಂಗಭೂಮಿಗೆ ಬರಬೇಕೆಂಬ ಆಸೆ ಹುಟ್ಟಿಕೊಂಡಿದ್ದು ಅದರಂತೆ ನಿರ್ದಿಂಗತ ಸಾಕಾರವಾಗಿದೆಪ್ರಕಾಶ್ರಾಜ್ ಚಿತ್ರನಟ
ಮಕ್ಕಳ ನಾಟಕಗಳ ಪ್ರದರ್ಶನ
ಕಾರ್ಯಕ್ರಮದ ಅಂಗವಾಗಿ ಬಿಂದು ರಕ್ಷಿದಿ ನಿರ್ದೇಶನದಲ್ಲಿ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ‘ಮೃಗ ಮತ್ತು ಸುಂದರಿ’ ನಾಟಕ ಪ್ರದರ್ಶನಗೊಂಡಿತು. ಮಧ್ಯಾಹ್ನ ವರದರಾಜ್ ಬಿರ್ತಿ ರಚಿಸಿ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ಕೊಕ್ಕರ್ಣೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಮಕ್ಕಳಿಂದ ವಿಜ್ಞಾನ ನಾಟಕ ‘ಕ್ಯೂರಿಯಸ್’ ಪ್ರದರ್ಶನಗೊಂಡಿತು. ಸಂಜೆ ಉದ್ಘಾಟನಾ ಸಮಾರಂಭದ ನಂತರ ರೋಹಿತ್ ಎಸ್. ಬೈಕಾಡಿ ನಿರ್ದೇಶನದಲ್ಲಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಮಕ್ಕಳ ನಾಟಕ ‘ಕುಣಿ ಕುಣಿ ನವಿಲೇ’ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.