ADVERTISEMENT

ಆಯುಷ್ಮಾನ್‌ ಭಾರತ್: ₹ 23.54 ಕೋಟಿ ವೆಚ್ಚದ ಚಿಕಿತ್ಸೆ

ಕಾರ್ಡ್‌ ವಿತರಣೆಯಲ್ಲಿ ಉಡುಪಿ ರಾಜ್ಯಕ್ಕೆ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 14:21 IST
Last Updated 6 ಡಿಸೆಂಬರ್ 2019, 14:21 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಉಡುಪಿ:ಬಡ ಹಾಗೂ ಮಧ್ಯಮ ವರ್ಗದವರಿಗೆ ಉಚಿತ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಜಾರಿಗೆ ಬಂದಿರುವ ಆಯುಷ್ಮಾನ್‌ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 7,706 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

2018ರ ಅಕ್ಟೋಬರ್‌ನಿಂದ ಯೋಜನೆ ಆರಂಭವಾಗಿದ್ದು, 2019ರ ನವೆಂಬರ್ ಅಂತ್ಯಕ್ಕೆಜಿಲ್ಲೆಯಲ್ಲಿ 7,706 ಮಂದಿ ₹ 23.54 ಕೋಟಿ ವೆಚ್ಚದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಅಂಕಿಅಂಶಗಳು ತಿಳಿಸಿವೆ.

ಇದರಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳ ವಿವರಗಳನ್ನು ನೋಡುವುದಾದರೆ,ಕಾರ್ಕಳ ತಾಲ್ಲೂಕಿನಲ್ಲಿ 1,436 ಫಲಾನುಭವಿಗಳು ₹ 3.94 ಕೋಟಿ ವೆಚ್ಚದ ಚಿಕಿತ್ಸೆ ಪಡೆದಿದ್ದರೆ, ಕುಂದಾಪುರದಲ್ಲಿ 3,257 ಮಂದಿ ₹ 10.04 ಕೋಟಿ, ಉಡುಪಿ ತಾಲ್ಲೂಕಿನಲ್ಲಿ 3,013 ರೋಗಿಗಳಗೆ ₹ 9.54 ಕೋಟಿ ವೆಚ್ಚದ ಚಿಕಿತ್ಸೆ ನೀಡಲಾಗಿದೆ.

ADVERTISEMENT

ರೆಫರಲ್‌ ಪಡೆಯದೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ.ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 2,550, ಕಾರ್ಕಳದಲ್ಲಿ 490 ಹಾಗೂ ಕುಂದಾಪುರದಲ್ಲಿ 952 ಮಂದಿ ಶಸ್ತ್ರಚಿಕಿತ್ಸೆ ಸೇರಿದಂತೆ ಇತರ ಚಿಕಿತ್ಸೆಗಳನ್ನು ಪಡೆದುಕೊಂಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಯೋಜನೆಯ ಉದ್ದೇಶವಾಗಿದ್ದು, ಇದರಡಿ ಚಿಕಿತ್ಸೆ ಪಡೆದುಕೊಂಡ ಫಲಾನುಭವಿಗಳ ಸಂಖ್ಯೆಯಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯು ರಾಜ್ಯದಲ್ಲಿ ಎಂಟನೇ ಸ್ಥಾನದಲ್ಲಿದೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

ಜಿಲ್ಲೆಯಲ್ಲಿ ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ಕಾರ್ಡ್ ವಿತರಣೆಯಲ್ಲಿ ಉಡುಪಿ ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿದೆ ಎಂದು ಆಯುಷ್ಮಾನ್‌ ಭಾರತ್, ಆರೋಗ್ಯ ಕರ್ನಾಟಕದ ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.