ಸಾಲಿಗ್ರಾಮ (ಬ್ರಹ್ಮಾವರ): ‘ಸಾಮೂಹಿಕ ಭಜನೆಯು ಸಾಮಾಜಿಕ ಹಾಗೂ ಸಾಂಘಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮಾನಸಿಕ ನೆಮ್ಮದಿಯನ್ನು ತರುವ ಉತ್ತಮ ಮಾಧ್ಯಮ ಭಜನೆ’ ಎಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ ಹೇಳಿದರು
ಸಾಲಿಗ್ರಾಮ ವಲಯ ಬ್ರಾಹ್ಮಣ ಮಹಾಸಭಾ ವತಿಯಿಂದ ಕಾರ್ತಿಕ ಮಾಸದ ನಿರಂತರ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಲಿಗ್ರಾಮ ಬ್ರಾಹ್ಮಣ ಮಹಾಸಭಾವು ವಲಯದ ವ್ಯಾಪ್ತಿಯ ಆಯ್ದ 26 ದೇವಸ್ಥಾನಗಳಲ್ಲಿ ಕಾರ್ತಿಕ ಮಾಸವಿಡೀ ಭಜನೆಯನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಕಾರ್ಯ ಎಂದರು.
ಸಾಲಿಗ್ರಾಮ ಪಾರಂಪಳ್ಳಿಯ ಮಹಾವಿಷ್ಣು ಭಜನಾ ಮಂಡಳಿ, ಕಾರ್ಕಡದ ಮಹಾಗಣಪತಿ ಮಹಿಳಾ ಭಜನಾ ಮಂಡಳಿ, ಸಾಲಿಗ್ರಾಮದ ರಾಮ ಮಹಿಳಾ ಭಜನಾ ಮಂಡಳಿ ಮತ್ತು ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯ ಸದಸ್ಯರು ಭಜಕರಾಗಿ ಭಾಗವಹಿಸಿದ್ದರು.
ಕೋಡಿ ಹಾಗೂ ಚಿತ್ರಪಾಡಿ ಗ್ರಾಮದ ಇಬ್ಬರು ಅನಾರೋಗ್ಯ ಪೀಡಿತರಿಗೆ ಸಭಾದ ವತಿಯಿಂದ ಧನ ಸಹಾಯ ವಿತರಿಸಲಾಯಿತು.
ಸಭಾದ ಅಧ್ಯಕ್ಷ ಎಂ.ಶಿವರಾಮ ಉಡುಪ, ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ, ಸುಬ್ರಾಯ ಉರಾಳ, ಕೋಶಾಧಿಕಾರಿ ಸುಬ್ರಹ್ಮಣ್ಯ ಹೇರ್ಳೆ ಇದ್ದರು. ಸಭಾದ ಕಾರ್ಯದಶಿ೯ ಕೆ.ರಾಜಾರಾಮ ಐತಾಳ ಸ್ವಾಗತಿಸಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.