
ಕತ್ತಲೆಗಿಂತ ಬೆಳಕು ಪ್ರಖರವಾದುದು, ಸುಳ್ಳಿಗಿಂತ ಸತ್ಯ ಹೆಚ್ಚು ಶಕ್ತಿಶಾಲಿ, ದ್ವೇಷಕ್ಕಿಂತ ಪ್ರೀತಿ ಹೆಚ್ಚು ಬಲಶಾಲಿ ಹಾಗೂ ಸ್ವಾರ್ಥಕ್ಕಿಂತ ತ್ಯಾಗ ಹೆಚ್ಚು ಶಕ್ತಿಯುತ ಎಂಬ ಸಂದೇಶವನ್ನು ಸಾರಿ ಹೊಸ ಭರವಸೆ ತೋರಲು ಬಂದಿದೆ ಈಸ್ಟರ್ ಹಬ್ಬ. ಯೇಸುಕ್ರಿಸ್ತನ ಪುನರುತ್ಥಾನದ ಉತ್ಸವದ ಸಂದರ್ಭ ಜಗತ್ತಿನ ಸಕಲರು ಕತ್ತಲೆಯಿಂದ ಬೆಳಕಿನೆಡೆಗೆ, ಅಸತ್ಯದಿಂದ ಸತ್ಯದೆಡೆಗೆ ನಡೆಯಲಿ.
ಒಂದು ವರ್ಷ ಇಡೀ ಜಗತ್ತು ಭೀತಿ, ಹತಾಶೆ ಹಾಗೂ ಸಂಕಷ್ಟದಿಂದ ಕೂಡಿತ್ತು. ಕೋವಿಡ್ನಿಂದ ಮಾನವ ಕುಲ ತತ್ತರಿಸಿದೆ. ವಿಶೇಷವಾಗಿ ಬಡವರು, ನಿರಾಶ್ರಿತರು, ನಿರ್ಗತಿಕರು ಹಾಗೂ ಕಾರ್ಮಿಕರು ಅತೀವ ಕಷ್ಟಗಳಿಗೆ ತುತ್ತಾಗಿದ್ದಾರೆ. ಕಳೆದ ವರ್ಷದ ಈಸ್ಟರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅವಕಾಶವಿರಲಿಲ್ಲ. ಈ ವರ್ಷವೂ ಪರಿಸ್ಥಿತಿ ಸುಧಾರಿಸಿಲ್ಲ. ಆದರೂ, ಈಸ್ಟರ್ ಹಬ್ಬ ಜೀವನದ ನಿರಾಶೆಯನ್ನು ಹೋಗಲಾಡಿಸಿ ಹೊಸ ಭರವಸೆಯನ್ನು ಮೂಡಿಸಲು ಒದಗಿಸಿದ ಸದಾವಕಾಶ ಎನ್ನಬಹುದು.
ಯೇಸು ಸಕಲ ಮಾನವಕುಲದ ರಕ್ಷಣೆಗಾಗಿ ಶಿಲುಬೆಯ ಮೇಲೆ ಮೃತಪಟ್ಟರು. ಶಿಲುಬೆಯು ವಿಮೋಚನೆ ನೀಡುವ, ಶಾಂತಿಯ ಜೀವನಕ್ಕೆ ಆಹ್ವಾನ ನೀಡುವ ದಿವ್ಯ ಸಾಧನ. ಕ್ರೈಸ್ತರಿಗೆ ಶಿಲುಬೆ ವಿಶೇಷವಾಗಿದ್ದು, ಭಕ್ತಿಪೂರ್ವಕವಾಗಿ ಕಾಣುತ್ತಾರೆ. ಕ್ರೈಸ್ತರ ಪ್ರತಿ ದಿನವು ಶಿಲುಬೆಯ ಗುರುತಿನೊಂದಿಗೆ ಆರಂಭವಾಗಿ ಕೊನೆಗೊಳ್ಳುತ್ತದೆ.ಮನುಷ್ಯ ಸ್ವಾರ್ಥ ತ್ಯಜಿಸಿ ಬಾಳಲು ದೇವರು ತೋರುವ ದಾರಿ ಶಿಲುಬೆಯ ಹಾದಿ.
ಜೀವನದಲ್ಲಿ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ. ಆದಷ್ಟು ಬೇಗ ಕೋವಿಡ್ ಲೋಕದಿಂದ ಮುಕ್ತಿ ಕಾಣಲಿ. ಯೇಸು ಪುನರುತ್ಥಾನರಾಗಿ ಬದುಕಿನ ಭರವಸೆ ನೀಡಿದ್ದಾರೆ. ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶನಾಗಬೇಕಿಲ್ಲ. ‘ಕತ್ತಲು ಕಳೆದು ಬೆಳಕು ಹರಿಯುವ’ ಖಚಿತ ಭರವಸೆ ಇರಲಿ.ಪುನರುತ್ಥಾನ ಹಬ್ಬವನ್ನು ಕೋವಿಡ್ನಿಂದ ಬಳಲುತ್ತಿರುವ ಹಾಗೂ ಅವರಿಗೆ ಚಿಕಿತ್ಸೆಯನ್ನು ನೀಡುವವರ ಕ್ಷೇಮಕ್ಕೆ ಪ್ರಾರ್ಥಿಸೋಣ.
ಡಾ. ಜೆರಾಲ್ಡ್ ಲೋಬೊ, ಉಡುಪಿ ಧರ್ಮಾಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.