ADVERTISEMENT

ಹಿಂದುತ್ವಕ್ಕಾಗಿ ಬಿಜೆಪಿಯ ನಾಯಕರು ಜೀವ ತೆತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 13:14 IST
Last Updated 30 ಅಕ್ಟೋಬರ್ 2018, 13:14 IST
ಬೈಂದೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
ಬೈಂದೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.   

ಉಡುಪಿ: ಧರ್ಮ ಹಾಗೂ ಹಿಂದುತ್ವಕ್ಕಾಗಿ ಯಾವ ಬಿಜೆಪಿ ಮುಖಂಡರೂ ಜೀವ ಕಳೆದುಕೊಂಡಿಲ್ಲ. ಅಮಾಯಕರ ಜೀವಗಳ ಮೇಲೆ ಅಧಿಕಾರ ಗದ್ದುಗೆ ಏರುತ್ತಿದ್ದಾರೆ. ಇದಕ್ಕೆ ಕರಾವಳಿ ಜನರು ಅವಕಾಶ ಕೊಡಬೇಡಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಬೈಂದೂರು ತಾಲ್ಲೂಕಿನ ತ್ರಾಸಿಯ ಕಾರ್ವಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದುತ್ವ, ಧರ್ಮದ ವಿಚಾರವನ್ನು ಬದಿಗಿಟ್ಟು ಕರಾವಳಿ ಭಾಗದ ಅಭಿವೃದ್ಧಿಗೆ ಹೋರಾಟ ಮಾಡಿ’ ಎಂದು ಸಲಹೆ ನೀಡಿದರು.

ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದು ಬಂದಿರುವ ಬಿಜೆಪಿ ನಾಯಕರು, ಸಮಸ್ಯೆಗಳಿಗೆ ಸ್ಪಂದಿಸದೆ ಎಸಿ ರೂಂನಲ್ಲಿ ಕುಳಿತಿದ್ದಾರೆ. ಮತದಾರರು ಮಾತ್ರ ಬಿಸಿಲಿನಲ್ಲಿ ಒಣಗುತ್ತಿದ್ದಾರೆ. ಧರ್ಮವನ್ನು ಎಲ್ಲರೂ ಸೇರಿ ಕಾಪಾಡೋಣ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಒಗ್ಗಟ್ಟಾಗಿ ಹೋರಾಡೋಣ’ ಎಂದರು.

ADVERTISEMENT

ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎಂದು ಬಿಜೆಪಿ ನಾಯಕರು ಕನಸು ಕಾಣುತ್ತಿದ್ದಾರೆ. ಕನಸು ಈಡೇರುವುದಿಲ್ಲ. ದೈವ ಪ್ರೇರಣೆಯಿಂದ ಮೈತ್ರಿ ಸರ್ಕಾರ ರಚನೆಯಾಗಿದೆ. ಸರ್ಕಾರದ ಆಯಸ್ಸನ್ನು ದೇವರೇ ನಿರ್ಧರಿಸಲಿದ್ದಾನೆ. ಯಡಿಯೂರಪ್ಪನವರು ಸರ್ಕಾರ ಬೀಳಲಿದೆ ಎಂದರೆ ಬೀಳುವುದಿಲ್ಲ ಎಂದು ತಿರುಗೇಟು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಪರಿಷತ್ ಸದಸ್ಯ ಭೋಜೇಗೌಡ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.