ADVERTISEMENT

'ಸೇವೆ, ಸುಶಾಸನ, ಬಡವರ ಕಲ್ಯಾಣ' ಅಭಿಯಾನ ಯಶಸ್ವಿಗೊಳಿಸಿ

ಜಿಲ್ಲೆಯಾದ್ಯಂತ ಪ್ರಧಾನಿ ಮೋದಿ ಆಡಳಿತದ 8ನೇ ವರ್ಷದ ಸಂಭ್ರಮ ಅಭಿಯಾನ: ಕುಯಿಲಾಡಿ ಸುರೇಶ್ ನಾಯಕ್‌

​ಪ್ರಜಾವಾಣಿ ವಾರ್ತೆ
Published 26 ಮೇ 2022, 13:53 IST
Last Updated 26 ಮೇ 2022, 13:53 IST
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಮೇ 30ರಿಂದ ಜೂನ್ 14ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಅಭಿಯಾನದ ಕುರಿತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಭೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಮೇ 30ರಿಂದ ಜೂನ್ 14ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿರುವ ಅಭಿಯಾನದ ಕುರಿತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸಭೆ ನಡೆಸಿದರು.   

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಉಚಿತ ಕೋವಿಡ್ ಲಸಿಕೆ ಹಾಗೂ ಪಡಿತರ ವಿತರಣೆ ಮೂಲಕ ಆಹಾರ ಮತ್ತು ಆರೋಗ್ಯ ಭದ್ರತೆಯನ್ನು ಖಾತ್ರಿಪಡಿಸಿದೆ ಎಂದುಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಗುರುವಾರ ನಡೆದ 'ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ' ಅಭಿಯಾನದ ಭಾಗವಾಗಿ ಜಿಲ್ಲಾ ಮತ್ತು ಮಂಡಲಗಳ ಸಂಚಾಲಕರು ಮತ್ತು ಸಹ ಸಂಚಾಲಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸವಾಲುಗಳನ್ನು ಎದುರಿಸಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಸರ್ಕಾರದ 8 ವರ್ಷಗಳ ಸಾಧನೆಗಳನ್ನು ಆಚರಿಸಲು ಜಿಲ್ಲೆಯಾದ್ಯಂತ ಮೇ 30ರಿಂದ ಜೂನ್ 14ರವರೆಗೆ 'ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ' ಅಭಿಯಾನ ನಡೆಯುತ್ತಿದ್ದು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಸಾಂಕ್ರಾಮಿಕ ಕಾಲಘಟ್ಟದಲ್ಲಿ ರಾಷ್ಟ್ರದ ಸೇವೆಗಾಗಿ ಪ್ರಧಾನಿ ಮೋದಿಯವರ ಅವಿರತ ಪ್ರಯತ್ನ ‘ಸೇವೆ’ಯನ್ನು ಬಿಂಬಿಸುತ್ತದೆ. ಹಾಗೆಯೇ ಉತ್ತಮ ಆಡಳಿತಕ್ಕೆ 'ಸುಶಾಸನ' ನಿದರ್ಶನವಾಗಿದೆ. ಬಡವರ ಪರವಾದ ಯೋಜನೆಗಳು ಬಡವರ ಕಲ್ಯಾಣವನ್ನು ಪ್ರತಿನಿಧಿಸುತ್ತದೆ ಎಂದರು.

ADVERTISEMENT

ಉಡುಪಿ ಜಿಲ್ಲೆಯು ಸಂಘಟನಾತ್ಮಕವಾಗಿ ಮುಂಚೂಣಿಯಲ್ಲಿದ್ದು ಹಿಂದೆಯೂ ಪಕ್ಷದ ಅಭಿಯಾನಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳು ಮತ್ತು 8 ವರ್ಷಗಳ ಸಂಭ್ರಮಾಚರಣೆಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಜಿಲ್ಲಾ ಮತ್ತು ಮಂಡಲಗಳ ತಂಡಗಳು ಬದ್ಧತೆಯಿಂದ ಶ್ರಮವಹಿಸಬೇಕು ಎಂದು ಕುಯಿಲಾಡಿ ಸೂಚನೆ ನೀಡಿದರು.

ಪಕ್ಷದ ಸಂಘಟನೆ ಕುರಿತು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ವೀಡಿಯೋ ಕಾನ್ಫರೆನ್ಸ್ ಮೂಲಕ ಬೂತ್ ಸಶಕ್ತೀಕರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲಾ ವ್ಯಾಪ್ತಿಯ 15 ಪ್ರಮುಖರ ತಂಡವನ್ನು ಇದೇವೇಳೆ ಘೋಷಿಸಲಾಯಿತು.

'ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ' ಅಭಿಯಾನದ ಜಿಲ್ಲಾ ಸಹ ಸಂಚಾಲಕ ಸದಾನಂದ ಉಪ್ಪಿನಕುದ್ರು ಜಿಲ್ಲಾ ಮತ್ತು ಮಂಡಲಗಳ ತಂಡದ ಜವಾಬ್ದಾರಿ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಅಭಿಯಾನದ ಪೂರ್ವಸಿದ್ಧತೆಗಳ ಬಗ್ಗೆ ವಿಭಾಗವಾರು ಸಂಚಾಲಕರಿಂದ ಮಾಹಿತಿ ಪಡೆದರು.

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಹಾಗೂ ಮಂಡಲ ಸಂಚಾಲಕರು, ಸಹ ಸಂಚಾಲಕರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.