ಬ್ರಹ್ಮಾವರ: ಕೋವಿಡ್ ಸಂಕಷ್ಟದ ಸಮಯದಲ್ಲಿ ಉಭಯ ಜಿಲ್ಲೆಗಳ ಹೈನುಗಾರರಿಗೆ ಬೆನ್ನೆಲುಬಾಗಿ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿಂತು ಹೈನುಗಾರರನ್ನು ಪ್ರೋತ್ಸಾಹಿಸಿರುವುದು ಉತ್ತಮ ಕಾರ್ಯ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಬ್ರಹ್ಮಾವರ ಹಾಲು ಉತ್ಪಾದಕರ ಮಹಿಳಾ ಸಂಘದ ‘ನಿಧಿ ನಂದಿನಿ’ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸಮಯದಲ್ಲಿ ಎಲ್ಲ ಉದ್ಯಮ ಕ್ಷೇತ್ರಗಳು ನಿಲುಗಡೆಗೊಂಡಿದ್ದರಿಂದ ಲಕ್ಷಾಂತರ ಮಂದಿ ಉದ್ಯೋಗ ಇಲ್ಲದೇ ಪರದಾಡಿದ್ದರು. ಆದರೆ, ಹೈನುಗಾರರು ಉತ್ಪಾದಿಸಿದ ಹಾಲಿಗೆ ಮಾರುಕಟ್ಟೆ ಇದ್ದ ಪರಿಣಾಮ ಅವರ ಸಂಕಷ್ಟ ದೂರವಾಗಿತ್ತು. ಸರ್ಕಾರ ಹಾಲಿಗೆ ಲೀಟರ್ ಒಂದಕ್ಕೆ ₹ 5 ಪ್ರೋತ್ಸಾಹಧನ ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕೆಎಂಎಫ್ ಅಧ್ಯಕ್ಷ ರವಿರಾಜ್ ಹೆಗ್ಡೆ ನಂದಿನಿ ಸಭಾಭವನವನ್ನು ಉದ್ಘಾಟಿಸಿದರು. ‘1986ರಲ್ಲಿ 4,500 ಲೀಟರ್ ಹಾಲು ಸಂಗ್ರಹಣೆಗೆ ತಿಣುಕಾಡುತ್ತಿದ್ದ ಸಂಘ ಈಗ ಪ್ರತಿ ನಿತ್ಯ 5.50 ಲಕ್ಷ ಲೀಟರ್ ಹಾಲು ಉತ್ಪಾದಿಸಿ ಸ್ವಾವಲಂಬಿ ಒಕ್ಕೂಟವಾಗಿದೆ. ಇದು ನಿಜಕ್ಕೂ ಸಾಧನೆಯಾಗಿದೆ. ಪ್ರಸ್ತುತ ಕೋವಿಡ್ ಕಾರಣದಿಂದಾಗಿ ರೈತರಿಗೆ ನೀಡುತ್ತಿರುವ ದರ ಕಡಿಮೆಯಾಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ದರ ನೀಡುತ್ತೇವೆ’ ಎಂದರು.
ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ದಾನಿಗಳ ನಾಮಫಲಕ ಅನಾವರಣಗೊಳಿಸಿದರು. ಬ್ರಹ್ಮಾವರ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹಾಲು ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಜಗದೀಶ ಕಾರಂತ್, ಸುಧಾಕರ ಶೆಟ್ಟಿ ಮುಡಾರು, ನರಸಿಂಹ ಕಾಮತ್ ಸಾಣೂರು, ಸ್ಮಿತಾ ಆರ್. ಶೆಟ್ಟಿ ಸೂಡ, ನಾಮನಿರ್ದೇಶಿತ ನಿರ್ದೇಶಕ ಗೋಪಾಲಕೃಷ್ಣ ಕಾಮತ್, ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಮಾಜಿ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಚಾಂತಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ, ಸದಸ್ಯರಾದ ದಿನೇಶ್ ಸೇರಿಗಾರ್, ಮಹೇಶ್ ಮೊಯ್ಲಿ, ಸರೋಜ ನಾಯರಿ, ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ, ಉಪವ್ಯವಸ್ಥಾಪಕ ಶಂಕರ ನಾಯ್ಕ ಇದ್ದರು.
ಬ್ರಹ್ಮಾವರ ಹಾಲು ಉತ್ಪಾದಕರ ಮಹಿಳಾ ಸಂಘದ ಉಪಾಧ್ಯಕ್ಷೆ ಪ್ರತಿಮಾ ಪಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವೀಣಾ ರಾಜೇಶ್ ವರದಿ ವಾಚಿಸಿದರು. ದಿವ್ಯಾ ಅಲ್ಮೆಡಾ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.