ADVERTISEMENT

ಸರ್ಕಾರಿ ಯೋಜನೆಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಿ: ಸುನಿತಾ ಶೆಟ್ಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 13:59 IST
Last Updated 4 ಜನವರಿ 2025, 13:59 IST
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯುವನಿಧಿ ಯೋಜನೆಯ ಮಾಹಿತಿ ಪೋಸ್ಟರ್, ಬ್ಯಾನರ್ ಬಿಡುಗಡೆಗೊಳಿಸಲಾಯಿತು
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯುವನಿಧಿ ಯೋಜನೆಯ ಮಾಹಿತಿ ಪೋಸ್ಟರ್, ಬ್ಯಾನರ್ ಬಿಡುಗಡೆಗೊಳಿಸಲಾಯಿತು   

ಬ್ರಹ್ಮಾವರ: ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಸಿದ್ಧತೆ, ಮಾಹಿತಿ ನೀಡುವ ಕಾರ್ಯತಂತ್ರಗಳನ್ನು ಅನುಸರಿಸುವುದು ಅಗತ್ಯ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಸುನಿತಾ ಶೆಟ್ಟಿ ಹೇಳಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಂತ್ರಿಕ ತೊಂದರೆಗಳಿಂದ ಯೋಜನೆಯ ಲಾಭ ಲಭ್ಯವಾಗದ ಫಲಾನುಭವಿಗಳಿಗೆ ಅಗತ್ಯ ಮಾಹಿತಿ ನೀಡುವ ಜವಾಬ್ದಾರಿಯೂ ನಮ್ಮ ಮೇಲಿದ್ದು, ಈ ಬಗ್ಗೆ ಆದ್ಯತೆ ನೀಡಬೇಕು. ಪಂಚ ಗ್ಯಾರಂಟಿಗಳ ಪ್ರಮುಖ ಉದ್ದೇಶ ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣವಾಗಿದ್ದು, ಅರ್ಹರು ವಂಚಿತರಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ADVERTISEMENT

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಸಭೆಯಲ್ಲಿ ಇಲಾಖೆಗಳಿಂದ ಮಾಹಿತಿ ಪಡೆಯಲಾಯಿತು. ಗೃಹಜ್ಯೋತಿ ಯೋಜನೆಯಡಿ ಈವರೆಗೆ 28,968 ಕುಟುಂಬಗಳು ನೋಂದಣಿಯಾಗಿದ್ದು, ₹28 ಕೋಟಿಯಷ್ಟು ಸಹಾಯಧನ ಫಲಾನುಭವಿಗಳಿಗೆ ತಲುಪಿದೆ. ಗೃಹಲಕ್ಷ್ಮಿ ಯೋಜನೆಯಡಿ 36,326 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು ಯೋಜನೆಯ ಸದುಪಯೋಗ ಪಡೆಯುತ್ತಿರುವುದನ್ನು ಸಭೆಯಲ್ಲಿ ಮಂಡಿಸಲಾಯಿತು.

ಶಕ್ತಿ ಯೋಜನೆಯಡಿ ಈವರೆಗೆ ₹70 ಕೋಟಿಯಷ್ಟು ಅನುದಾನ ವಿನಿಯೋಗವಾಗಿದ್ದು, ಅನ್ನಭಾಗ್ಯ ಯೋಜನೆಯಡಿ 32,037 ಕುಟುಂಬಗಳು ನೋಂದಾಯಿಸಿಕೊಂಡಿದ್ದು ₹2.8 ಕೋಟಿಯಷ್ಟು ಅನುದಾನ ವಿನಿಯೋಗವಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

ಗ್ರಾಮೀಣ ಪ್ರದೇಶಗಳಲ್ಲಿ ವೈಯಕ್ತಿಕವಾಗಿ ಹಾಗೂ ಪಂಚಾಯಿತಿ ಮಟ್ಟದ ಸಭೆಗಳಲ್ಲಿ ಯೋಜನೆಗಳ ಮಾಹಿತಿ ನೀಡುವುದು ಅಗತ್ಯವಿದೆ ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಯುವನಿಧಿ ಯೋಜನೆಯ ಮಾಹಿತಿ ಪೋಸ್ಟರ್, ಬ್ಯಾನರ್‌ಗಳನ್ನು ಬಿಡುಗಡೆಗೊಳಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ, ಸಹಾಯಕ ನಿರ್ದೇಶಕ ಮಹೇಶ ಕೆ, ಸಮಿತಿ ಸದಸ್ಯರಾದ ಗೋಪಾಲ ಪೂಜಾರಿ, ಶೀನ ಪೂಜಾರಿ, ಸೈಯದ್ ಅಬ್ಬು ಮಹಮ್ಮದ್, ಗೋಪಿ ಕೆ. ನಾಯ್ಕ, ಮಾಧವ ನಾಯ್ಕ, ರೇಖಾ ಸುವರ್ಣ, ಶ್ರೀನಿವಾಸ ವಡ್ಡರ್ಸೆ, ರಮೇಶ ತಿಂಗಳಾಯ, ದಿವಾಕರ ಗಾಣಿಗ, ಸುಧಾಕರ ಶೆಟ್ಟಿ, ಸುರೇಶ ಪೂಜಾರಿ, ರಾಮಕೃಷ್ಣ, ಶ್ರೀಕಾಂತ ಆಚಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಮಹೇಶ ಕೆ. ಸ್ವಾಗತಿಸಿದರು. ಗೋಪಾಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.