ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ಮಂಜೂರಾಗಿರುವ ಬಿಎಸ್ಎನ್ಎಲ್ ಟವರ್ಗಳ ನಿರ್ಮಾಣಕ್ಕೆ ಜಾಗ ಮಂಜೂರಾತಿ, ಮಂಜೂರಾದ ಜಾಗಗಳಲ್ಲಿ ಟವರ್ ನಿರ್ಮಾಣ ಪ್ರಗತಿ, ಕಾಮಗಾರಿಗಳ ವಿವಿಧ ಹಂತಗಳ ಕುರಿತು 2 ದಿನಗಳಿಂದ ಬಿಎಸ್ಎನ್ಎಲ್ ಕರ್ನಾಟಕ ವೃತ್ತದ ಮುಖ್ಯ ಜನರಲ್ ಮ್ಯಾನೇಜರ್ (ಟೆಲಿಕಾಂ) ಎನ್. ಸುಜಾತಾ ಅವರು ಸ್ಥಳ ಪರಿಶೀಲನೆ ನಡೆಸಿದರು.
ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆಯಲ್ಲಿ, ಸಾಗರ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಕಚೇರಿಯಲ್ಲಿ ಎನ್. ಸುಜಾತಾ, ನಿಗಮದ ಜನರಲ್ ಮ್ಯಾನೇಜರ್ ಬಿ.ಕೆ. ಸಿಕ್ಕಾ, ಡೆಪ್ಯುಟಿ ಜನರಲ್ ಮ್ಯಾನೇಜರ್ ಕೃಷ್ಣ ಮೊಗೇರ ಮತ್ತು ವೆಂಕಟೇಶ್, ಸಹಾಯಕ ಜನರಲ್ ಮ್ಯಾನೇಜರ್, ಜ್ಯೂನಿಯರ್ ಟೆಲಿಕಾಂ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಶುಕ್ರವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸಂಸದ ಬಿ.ವೈ. ರಾಘವೇಂದ್ರ ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 28 ಟವರ್ ಮಂಜೂರಾಗಿದ್ದು, ಆ ಪೈಕಿ 22 ಟವರ್ಗಳ ಕಾಮಗಾರಿ ಪೂರ್ಣಗೊಂಡಿದ್ದು, ಸಾರ್ವಜನಿಕ ಸೇವೆಗೆ ಲಭ್ಯವಾಗಿದೆ. 6 ಟವರ್ಗಳ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಮುಖ್ಯ ಜನರಲ್ ಮ್ಯಾನೇಜರ್ಗೆ ಸೂಚಿಸಿದರು.
ಕೆಟಗರಿ 5 ಮತ್ತು 6ರಲ್ಲಿ ಹೊಸನಗರ ತಾಲ್ಲೂಕಿಗೆ 7, ಸಾಗರಕ್ಕೆ 7, ಶಿಕಾರಿಪುರಕ್ಕೆ 2, ಸೊರಬಕ್ಕೆ 7, ತೀರ್ಥಹಳ್ಳಿಗೆ 8 ಟವರ್ ಮಂಜೂರಾಗಿದ್ದು, ಟವರ್ ನಿರ್ಮಾಣ ಮಾಡಲು ಜಾಗವನ್ನು ಶೀಘ್ರ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಿವಮೊಗ್ಗದಿಂದ ತೀರ್ಥಹಳ್ಳಿ, ಸಾಗರ, ಹೊಸನಗರ ತಾಲ್ಲೂಕಿಗೆ ಹೋಗುವ ಹೆದ್ದಾರಿ ರಸ್ತೆಗಳಲ್ಲಿ (ಅರಣ್ಯ ಪ್ರದೇಶದಲ್ಲಿ) ಅನಾಹುತ ಸಂಭವಿಸಿದಲ್ಲಿ ಸಂಪರ್ಕಿಸಲು ನೆಟ್ವರ್ಕ್ ಸಮಸ್ಯೆಯಿದ್ದು, ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.