ADVERTISEMENT

ಹೆಬ್ರಿ: ಕೃಷಿಕರು, ರೈತರು ಪ್ರವಾಸ ಮಾಡಲು ಸಲಹೆ

ಕಾವಿನಲ್ಲಿ ಚಾಕಲೇಟ್‌ ಪಾರ್ಕ್‌ಶೀಘ್ರ: ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 14:54 IST
Last Updated 3 ಆಗಸ್ಟ್ 2021, 14:54 IST
ಹೆಬ್ರಿ ಸಮೀಪದ ಕುಚ್ಚೂರಿನಲ್ಲಿ ಎಚ್. ರಾಜೀವ ಶೆಟ್ಟಿಯವರ ಕೃಷಿಕ್ಷೇತ್ರದಲ್ಲಿ ಮಂಗಳವಾರ ಮಂಗಳೂರಿನ ಕ್ಯಾಂಪ್ಕೊ ವತಿಯಿಂದ ನಡೆದ ಹೈಟೆಕ್ ದೋಟಿ-ಕೊಕ್ಕೆ ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ಔಷಧಿ ಸಿಂಪಡಣೆಯ  ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಗಾರದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಅವರನ್ನು ಗೌರವಿಸಲಾಯಿತು. 
ಹೆಬ್ರಿ ಸಮೀಪದ ಕುಚ್ಚೂರಿನಲ್ಲಿ ಎಚ್. ರಾಜೀವ ಶೆಟ್ಟಿಯವರ ಕೃಷಿಕ್ಷೇತ್ರದಲ್ಲಿ ಮಂಗಳವಾರ ಮಂಗಳೂರಿನ ಕ್ಯಾಂಪ್ಕೊ ವತಿಯಿಂದ ನಡೆದ ಹೈಟೆಕ್ ದೋಟಿ-ಕೊಕ್ಕೆ ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ಔಷಧಿ ಸಿಂಪಡಣೆಯ  ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಗಾರದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಅವರನ್ನು ಗೌರವಿಸಲಾಯಿತು.    

ಹೆಬ್ರಿ: ‘ಕೃಷಿಕರು, ರೈತರು ಕೇವಲ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಜೀವನದಲ್ಲಿ ಸಂತೋಷದಿಂದಿರಬೇಕು, ಬಿಡುವಿನ ಸಮಯದಲ್ಲಿ ಪ್ರವಾಸ ಮಾಡಬೇಕು, ಅದಕ್ಕಾಗಿ ಕಾವುನಲ್ಲಿ ₹30 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲೇ ಕ್ಯಾಂಪ್ಕೊ ಚಾಕಲೇಟ್‌ ಪಾರ್ಕ್‌ ನಿರ್ಮಾಣ ಮಾಡಲಾಗುತ್ತದೆ. ಎಲ್ಲರೂ ಪಾರ್ಕ್‌ನ ಪ್ರಯೋಜನವನ್ನು ಪಡೆದುಕೊಳ್ಳಬೇಕು’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಹೇಳಿದರು.

ಕುಚ್ಚೂರಿನಲ್ಲಿ ಪ್ರಗತಿಪರ ಕೃಷಿಕ ಎಚ್. ರಾಜೀವ ಶೆಟ್ಟಿ ಅವರ ಕೃಷಿಕ್ಷೇತ್ರದಲ್ಲಿ ಮಂಗಳೂರಿನ ಕ್ಯಾಂಪ್ಕೊ ವತಿಯಿಂದ ಮಂಗಳವಾರ ನಡೆದ ಹೈಟೆಕ್ ದೋಟಿ (ಕೊಕ್ಕೆ) ಬಳಸಿ ಅಡಿಕೆ ಕೊಯ್ಲು ಮತ್ತು ಅಡಿಕೆಗೆ ಔಷಧಿ ಸಿಂಪಡಣೆಯ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರಿನ ಕ್ಯಾಂಪ್ಕೊ ಕೇಂದ್ರವನ್ನು ಇನ್ನಷ್ಟು ಸದೃಢಗೊಳಿಸಿ ರೈತ ಸ್ನೇಹಿಯಾಗಿ ಬೆಳೆಸುತ್ತೇವೆ. ಹೆಬ್ರಿ ತಾಲ್ಲೂಕು ಆಗಿದ್ದು ಸಾಕಷ್ಟು ರೈತರು ಪರಿಸರದಲ್ಲಿದ್ದು, ಹೆಬ್ರಿಯ ಕ್ಯಾಂಪ್ಕೊ ಶಾಖೆಗೆ ಸ್ವಂತ ಕಟ್ಟಡ ನಿರ್ಮಿಸುತ್ತೇವೆ, ಎಲ್ಲರೂ ಸಹಕಾರ ನೀಡಿ ಎಂದು ಕಿಶೋರ್ ಕುಮಾರ್‌ ಕೊಡ್ಗಿ ಮನವಿ ಮಾಡಿದರು. ಸಂಘದ ಎಲ್ಲಾ ಸಕ್ರಿಯ ಸದಸ್ಯರಿಗೆ ₹5 ಲಕ್ಷ ಮೊತ್ತದ ವಿಮಾ ಸೌಲಭ್ಯವನ್ನು ನೀಡುವ ಮಹತ್ವದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್‌ ಕೊಡ್ಗಿ ಕೃಷಿಕ ಎಚ್. ರಾಜೀವ ಶೆಟ್ಟಿ ಗೌರವಿಸಿದರು.

ADVERTISEMENT

ನೆಲದಿಂದಲೇ ಹೈಟೆಕ್ ದೋಟಿಯಿಂದ 60ರಿಂದ 80 ಅಡಿ ಮೇಲಿರುವ ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ, ಅತ್ಯಾಧುನಿಕ ಬ್ಯಾಟರಿ ಸ್ಪ್ರೇಯರ್ ಗಳ ಪ್ರಾತ್ಯಕ್ಷಿಕೆ, ಅಡಿಕೆ ಮರಗಳಿಗೆ ಹಬ್ಬಿರುವ ಕಾಳುಮೆಣಸಿನ ಬಳ್ಳಿಗಳಿಗೆ ಹಾನಿಯಾಗದಂತೆ ಅಡಿಕೆ ಕೊಯ್ಲು ಮಾಡುವ ವಿಧಾನ, ದೋಟಿಯಿಂದ ಕೊಯ್ಲು ಮಾಡಿದ ಅಡಿಕೆ ನೆಲಕ್ಕೆ ಬೀಳದಂತೆ ಹಿಡಿಯುವ ವಿಧಾನ, ಪರಿಣಾಮಕಾರಿಯಾಗಿ ಔಷಧಿ ಸಿಂಪಡಣೆ ಮಾಡಿ ಕೊಳೆರೋಗದಿಂದ ಅಡಿಕೆ ಬೆಳೆಯ ರಕ್ಷಣೆಯ ಬಗ್ಗೆ ಹಾಸನ ಅರಕಲಗೂಡಿನ ಮೆಕ್ಯಾನಿಕಲ್ ಎಂಜಿಜಿನಿಯರ್ ಬಾಲಸುಬ್ರಹ್ಮಣ್ಯ ಮತ್ತು ತಂಡದವರು ಪ್ರಾತ್ಯಕ್ಷತೆ ನೀಡಿದರು. ಕ್ಯಾಂಪ್ಕೊ ನಿರ್ದೇಶಕ ದಯಾನಂದ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್‌, ಕೃಷಿಕ ದೇವಳಬೈಲು ಶಿವರಾಮ ಶೆಟ್ಟಿ, ವಿವಿಧ ಕೃಷಿಕರು,ಪ್ರಮುಖರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.